ಹನೂರು ಅರಣ್ಯಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಎನ್ಕೌಂಟರ್ಗೆ ಮೂವರು ಬಲಿಯಾಗಿರುವುದಕ್ಕೆ ಪ್ರತೀಕಾರವಾಗಿ ಸ್ಥಳೀಯರು ಮಲೆ ಮಹದೇಶ್ವರ ವನ್ಯಜೀವಿಧಾಮದ ಹತ್ತು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ.
ಎನ್ಕೌಂಟರ್ ಬಳಿಕ ಅರಣ್ಯ ಇಲಾಖೆಯ ಬೇಟೆ ತಡೆ ಶಿಬಿರ, ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಅರಣ್ಯ ಸಿಬ್ಬಂದಿಯನ್ನುಗುರಿಯಾಗಿಸಿ ದಾಳಿಗಳನ್ನು ನಡೆಸಲಾಗುತ್ತಿದೆ. ಮೂವರ ಸಾವಿನ ಬಳಿಕ ಸ್ಥಳೀಯರು ಜಿಲೆಟಿನ್ ಬಳಸಿ ಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸಿದ್ದರು. ಬಳಿಕ ಕಾಡಿಗೆ ಬೆಂಕಿ ಹಚ್ಚಿದ್ದು, 10 ಎಕರೆ ಅರಣ್ಯ ಸಂಪೂರ್ಣವಾಗಿ ಭಸ್ಮವಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕೊತ್ತನೂರು ವಲಯದಲ್ಲಿರುವ ಮಿಂಚಿನರೆಹಳ್ಳ ಅಕ್ರಮ ಬೇಟೆ ತಡೆ ಶಿಬಿರವನ್ನು ಸ್ಫೋಟಿಸಲಾಗಿದೆ, ಶಿಬಿರದ ಗೋಡೆಗಳು ಹಾನಿಗೊಂಡಿದ್ದು, ಒಳಗೆ ಇರಿಸಲಾಗಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಪ್ರದೇಶಕ್ಕೆ
ನಕ್ಸಲ್ ನಿಗ್ರಹ ಪಡೆ ಭೇಟಿ ನೀಡುವ ಸಾಧ್ಯತೆಯಿದೆ.
ಈ ಎನ್ಕೌಂಟರ್ ವಿಧಾನಸಭೆ, ವಿಧಾನಪರಿಷತ್ನಲ್ಲಿ ಗದ್ದಲ್ಲಕೆ ಕಾರಣವಾಗಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ ಮತ್ತು ತಮಿಳುನಾಡು ಸಿಎಂ ವಿಜಯನ್ ಇದು ನಕಲಿ ಎನ್ಕೌಂಟರ್ ಎಂದು ಆರೋಪಿಸಿದ್ದಾರೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡು, 34 ಕೆ.ಜಿ ಜಿಂಕೆ ಮಾಂಸ ಹಾಗೂ ಬಂದೂಕುಗಳ ಫೋಟೋಗಳನ್ನು ಸಾಕ್ಷಿಯಾಗಿ ಪ್ರದರ್ಶಿಸಿದ್ದರು.
ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋಗಳೇ ಈಗ ಸಾರ್ಜನಿಕರು ಮತ್ತು ಅಧಿಕಾರಿಗಳಲ್ಲಿ ಅನುಮಾನ ಹುಟ್ಟು ಹಾಕಿದೆ. ಜಿಂಕೆ ಮಾಂಸ, ಬಂದೂಕು, ಚಾಕು ಹಾಗೂ ಅಡುಗೆ ಸಾಮಾನಿನ ಜೊತೆ ಹೊಸ ಚಪ್ಪಲಿ ಸ್ಟಿಕ್ಕರ್ ಕೂಡ ತೆಗೆಯದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಶೂಟೌಟ್ ಪ್ರಕರಣ ಬೆಳಕಿಗೆ ಬಂದ ನಂತರ ಹೊಳೆ ಮುರುದಟ್ಟಿಯಲ್ಲಿರುವ ಕಳ್ಳ ಬೇಟೆ ತಡೆ ಕ್ಯಾಂಪ್ಗೆ ದುಷ್ಕರ್ಮಿಗಳು ನುಗ್ಗಿ, ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಕಟ್ಟಡ ಸ್ಫೋಟಿಸಿದ್ದು, ಅರಣ್ಯ ಸಿಬ್ಬಂದಿ ಈ ಮಾಹಿತಿಯನ್ನು ಮುಚ್ಚಿಟ್ಟಿರುವುದು ಕೂಡ ಅನುಮಾನ ಹೆಚ್ಚಿಸಿದೆ.


