ನಾವು ಕೇವಲ ಒಂದು ಉಪಕರಣವನ್ನು ಲೋಕಾರ್ಪಣೆ ಮಾಡುತ್ತಿಲ್ಲ. ನಾವು ಒಂದು ಕನಸಿಗೆ ಚಾಲನೆ ನೀಡುತ್ತಿದ್ದೇವೆ . ಗ್ರಾಮೀಣ ಹಳ್ಳಿಗಳಿಂದ ಹಿಡಿದು ನಗರ ಕೇಂದ್ರಗಳವರೆಗೆ ಕರ್ನಾಟಕದ ಪ್ರತಿಯೊಂದು ಮಗುವೂ ಕಲಿಯಬೇಕು, ಮತ್ತು ಕೃತಕ ಬುದ್ಧಿಮತ್ತೆಯ (AI) ಭವಿಷ್ಯವನ್ನು ರೂಪಿಸಬೇಕು ಎಂಬ ಕನಸು ಎಂದು ಮುಖ್ಯಮಂತ್ರಿ ಡಿಕೆ ಶಿವ ಕುಮಾರ್ ಹೇಳಿದ್ದಾರೆ.
ಕಿಯೋನಿಕ್ಸ್ ವತಿಯಿಂದ ಆಯೋಜಿಸಲಾಗಿದ್ದ ಕೃತಕ ಬುದ್ಧಿಮತ್ತೆ ಸನ್ನದ್ಧ ‘ಕೆಇಒ’ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ಬಳಕೆಯು ಸಮಾನತೆ, ಅವಕಾಶ ಮತ್ತು ಬೆಳವಣಿಗೆಗೆ ಅಡಿಪಾಯವಾಗಿದ್ದು, ಈ ದಿಸೆಯಲ್ಲಿ ಇಂದು ಲೋಕಾರ್ಪಣೆಗೊಂಡ KEO AI PC – 2026 ಸಾಧನವು ಲಕ್ಷಾಂತರ ವಿದ್ಯಾರ್ಥಿಗಳನ್ನು ಸಬಲಗೊಳಿಸುವ ಸಾಧನವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಪಯಣ ಆಕಸ್ಮಿಕವಾಗಿ ನಡೆದಿದ್ದಲ್ಲ. ಇದನ್ನು ದೂರದೃಷ್ಟಿಯ ನಾಯಕರು ಮತ್ತು ಬದ್ಧತೆಯುಳ್ಳ ಸಂಸ್ಥೆಗಳು ನಿರ್ಮಿಸಿವೆ. ಎಲೆಕ್ಟ್ರಾನಿಕ್ಸ್ ಅಭಿವೃದ್ಧಿಯ ಆರಂಭಿಕ ದಿನಗಳಿಂದ ಹಿಡಿದು ಜಾಗತಿಕ ಐಟಿ ಶಕ್ತಿಯಾಗಿ ಹೊರಹೊಮ್ಮುವವರೆಗೆ, ಈ ರಾಜ್ಯವು ಯಾವಾಗಲೂ ನಾವೀನ್ಯತೆಯನ್ನು ನಂಬಿದೆ. ಕರ್ನಾಟಕವು ತಂತ್ರಜ್ಞಾನವನ್ನು ಕೇವಲ ಅಳವಡಿಸಿಕೊಳ್ಳಲಿಲ್ಲ, ಭಾರತದ ಸಿಲಿಕಾನ್ ವ್ಯಾಲಿಯಾಗಲು ನಾವು ನಮ್ಮದೇ ಆದ ಹಾದಿಯನ್ನು ಕಂಡುಕೊಂಡೆವು ಎಂದು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ಎನ್ನುವುದು ಕೇವಲ ಒಂದು ತುಂಡು ಭೂಮಿಯಾಗಿರಲಿಲ್ಲ. ಅದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಸಾಕಾರಗೊಳಿಸಿದ ಒಂದು ದಿಟ್ಟ ಕಲ್ಪನೆಯಾಗಿತ್ತು. ಅವರ ದೂರದೃಷ್ಟಿಯು ಖಾಲಿ ಜಾಗವನ್ನು ತಂತ್ರಜ್ಞಾನದ ಕೇಂದ್ರವಾಗಿ ಪರಿವರ್ತಿಸಿತು. ತಂತ್ರಜ್ಞಾನವು ಪ್ರಗತಿಯನ್ನು ತರಬಲ್ಲದು ಮತ್ತು ಸಮಾಜಕ್ಕೆ ನೆರವಾಗಬಲ್ಲದು ಎಂದು ಅವರು ನಂಬಿದ್ದರು. ಹೀಗೆ ‘ಕಿಯೋನಿಕ್ಸ್’ (KEONICS) ಜನ್ಮತಾಳಿತು ಮತ್ತು 1978 ರಲ್ಲಿ ಕಿಯೋನಿಕ್ಸ್ ಸಂಸ್ಥೆಯು ಎಲೆಕ್ಟ್ರಾನಿಕ್ ಸಿಟಿಯನ್ನು ಅಭಿವೃದ್ಧಿಪಡಿಸಿತು ಎಂಬುದು ಹೆಮ್ಮೆಯ ವಿಷಯವಾಗಿದೆ. ಬಲವಾದ ತಂತ್ರಜ್ಞಾನ ಮೂಲಸೌಕರ್ಯವು ಕರ್ನಾಟಕದ ಭವಿಷ್ಯಕ್ಕೆ ಅತ್ಯಗತ್ಯ ಎಂಬುದನ್ನು ಅರಿತ ಎಸ್.ಎಂ. ಕೃಷ್ಣ ಅವರು ನಂತರ ಈ ದೂರದೃಷ್ಟಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು ಎಂದರು.
ದೇವರಾಜ ಅರಸು ಮತ್ತು ಎಸ್.ಎಂ. ಕೃಷ್ಣ ಸಂಪೂರ್ಣ ಪೀಳಿಗೆಯ ನಾವೀನ್ಯತೆಗೆ ಅಡಿಪಾಯ ಹಾಕಿಕೊಟ್ಟರು. ಈ ಯಶಸ್ವಿ ಪಯಣದಲ್ಲಿ ಕಿಯೋನಿಕ್ಸ್ ಪ್ರಮುಖ ಪಾತ್ರ ವಹಿಸಿರುವುದಕ್ಕೆ ನನಗೆ ಸಂತೋಷವಿದೆ.
ಕರ್ನಾಟಕದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಬೆಳವಣಿಗೆಗೆ ಕಿಯೋನಿಕ್ಸ್ ಬೆನ್ನೆಲುಬಾಗಿದೆ. ನಮ್ಮ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ ಎಂದರು.
ಕಿಯೋನಿಕ್ಸ್ ಎನ್ನುವುದು ಕೇವಲ ಒಂದು ಸಂಸ್ಥೆಯಲ್ಲ. ಇದು ಕರ್ನಾಟಕದ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಕಿಯೋನಿಕ್ಸ್ ಪ್ರತ್ಯೇಕ ಯೋಜನೆಗಳಿಗೆ ಬೆಂಬಲ ನೀಡುವುದರಿಂದ ಹಿಡಿದು, ನಮ್ಮ ರಾಜ್ಯದ ಮೂಲೆ ಮೂಲೆಗೂ ತಲುಪುವ ಉಪಕ್ರಮಗಳ ನೇತೃತ್ವ ವಹಿಸುವವರೆಗೆ ಬೆಳೆದಿದೆ. KEO ಈ ಬೆಳವಣಿಗೆಗೆ ಸೂಕ್ತ ಉದಾಹರಣೆಯಾಗಿದೆ. ತಾಂತ್ರಿಕ ನಾವೀನ್ಯತೆಯಿಂದ ಹಿಡಿದು ಲಕ್ಷಾಂತರ ವಿದ್ಯಾರ್ಥಿಗಳನ್ನು ಸಬಲಗೊಳಿಸುವ ಸಾಧನವಾಗಿ ಇದು ಹೊರಹೊಮ್ಮಿದೆ. ಬೆಂಗಳೂರಿನಲ್ಲಿ ಪ್ರಾರಂಭವಾದದ್ದು ಈಗ ಕರ್ನಾಟಕದ ಅತ್ಯಂತ ದೂರದ ಹಳ್ಳಿಗಳಲ್ಲಿರುವ ಕೊನೆಯ ಸರ್ಕಾರಿ ಶಾಲೆಯನ್ನೂ ತಲುಪುತ್ತದೆ. ಈ ಯೋಜನೆಯನ್ನು ಜಾರಿಗೊಳಿಸಿದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡರ ಪ್ರಯತ್ನವನ್ನು ಶ್ಲಾಘಿಸಿದರು. ಈ ಪಿಸಿ ಅಭಿವೃದ್ಧಿ ಪಡಿಸಿದ ಎಲ್ಲರನ್ನೂ ಅಭಿನಂದಿಸಿದರು.
ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿಯವರು ಕಿಯೋ ಏಐ ಪಿಸಿ 2026 ಉಪಕರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ವರದಾನ. ಹಲವು ವರ್ಷಗಳಿಂದ, ಪ್ರತಿಭೆಗಳು ಬೆಂಗಳೂರಿನತ್ತ ಹರಿದು ಬರುತ್ತಿದ್ದವು. ಇಂದು, KEO ನೊಂದಿಗೆ, ನಾವು ಆ ಚಿತ್ರಣವನ್ನು ಬದಲಾಯಿಸುತ್ತಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ಶಾಲೆಯಲ್ಲೇ ಕಂಪ್ಯೂಟಿಂಗ್ ಮತ್ತು AI ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವ ಮೂಲಕ, ನಾವು ಇಡೀ ರಾಜ್ಯದಾದ್ಯಂತ ಪ್ರತಿಭಾವಂತರ ಪಡೆಯನ್ನೇ ನಿರ್ಮಿಸುತ್ತಿದ್ದೇವೆ. ಇದು ಕೇವಲ ತಂತ್ರಜ್ಞಾನದ ಲಭ್ಯತೆಯ ವಿಷಯವಲ್ಲ. ಇದು ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ಒದಗಿಸುವುದಾಗಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳು ಯಾವಾಗಲೂ ನಮ್ಮ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿವೆ. ಆದರೂ, ಅವು ಡಿಜಿಟಲ್ ಕ್ರಾಂತಿಯಲ್ಲಿ ಹಿಂದುಳಿದಿವೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಇತ್ತೀಚಿನ ತಂತ್ರಜ್ಞಾನದ ಸೌಲಭ್ಯವಿದೆ. ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಅದೇ ಅವಕಾಶಕ್ಕೆ ಅರ್ಹರಾಗಿದ್ದಾರೆ.ನಿಮ್ಮ ಮಗುವಿನ ಪಿನ್ ಕೋಡ್ (ZIP code) ಎಂದಿಗೂ ತಂತ್ರಜ್ಞಾನ ಮತ್ತು ಅವಕಾಶಗಳ ಲಭ್ಯತೆಯನ್ನು ನಿರ್ಧರಿಸಬಾರದು ಎಂದರು.
ನಾವು ಸರ್ಕಾರಿ ಶಾಲೆಗಳಲ್ಲಿ 1,000 KEO AI PC ಗಳೊಂದಿಗೆ ಸ್ಪಷ್ಟ ದೂರದೃಷ್ಟಿಯಿಟ್ಟುಕೊಂಡು ಪ್ರಾರಂಭಿಸುತ್ತಿದ್ದೇವೆ. ಕರ್ನಾಟಕದ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ತಲುಪುವುದು ನಮ್ಮ ಗುರಿ. ಇದು ಕೇವಲ ಒಂದು ಪ್ರಯೋಗವಲ್ಲ. ಇದೊಂದು ಬದ್ಧತೆ. ಇದೊಂದು ಭರವಸೆ. ಪ್ರತಿಯೊಂದು ಸರ್ಕಾರಿ ಶಾಲೆಯು 21ನೇ ಶತಮಾನದ ಕಲಿಕೆಗೆ ಅಗತ್ಯವಿರುವ ಸಾಧನಗಳನ್ನು ಹೊಂದಿರುವ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಕಿಯೋ ಏಐ ಪಿಸಿ ಯನ್ನು ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಗ್ರಾಮೀಣ ಕರ್ನಾಟಕದ ವಿದ್ಯಾರ್ಥಿಯೊಬ್ಬ KEO ನಲ್ಲಿ ಕೋಡಿಂಗ್ ಕಲಿತಾಗ, ಅದು ಅವರ ಜೀವನವನ್ನು ಬದಲಾಯಿಸುತ್ತದೆ.ಶಿಕ್ಷಕರು ಸಂವಾದಾತ್ಮಕ AI-ಆಧಾರಿತ ಕಲಿಕಾ ಉಪಕರಣಗಳನ್ನು ಬಳಸಿದಾಗ, ವಿದ್ಯಾರ್ಥಿಗಳು ಉತ್ತಮವಾಗಿ ತೊಡಗಿಸಿಕೊಳ್ಳುತ್ತಾರೆ. ಯುವಕರು AI, ಮೆಷಿನ್ ಲರ್ನಿಂಗ್ ಮತ್ತು ಎಲೆಕ್ಟ್ರಾನಿಕ್ಸ್ನಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಂಡಾಗ – ನಾಳೆಯ ಕೈಗಾರಿಕೆಗಳಿಗೆ ಅಗತ್ಯವಿರುವ ಪ್ರತಿಭೆಯನ್ನು ಕರ್ನಾಟಕ ಅಭಿವೃದ್ಧಿಪಡಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನವು ಸಮಾನತೆ, ಅವಕಾಶ ಮತ್ತು ಬೆಳವಣಿಗೆಗೆ ಅತ್ಯಗತ್ಯ ಅಡಿಪಾಯವಾಗಿದೆ ಎಂದರು.
KEO ಅನ್ನು ಕೇವಲ ಲಾಭಕ್ಕಾಗಿ ಅಭಿವೃದ್ಧಿಪಡಿಸಲಾಗಿಲ್ಲ, ಸಾರ್ವಜನಿಕ ಒಳಿತು, ಸಾಮಾಜಿಕ ಪ್ರಭಾವ ಮತ್ತು ಎಲ್ಲರನ್ನೊಳಗೊಂಡ ಬೆಳವಣಿಗೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಸರ್ಕಾರ, ಕಿಯೋನಿಕ್ಸ್ ಮತ್ತು ನಮ್ಮ ಸೆಮಿಕಂಡಕ್ಟರ್ ಉದ್ಯಮದ ನಡುವಿನ ಸಹಯೋಗವು ನಾವು ಒಟ್ಟಾಗಿ ಕೆಲಸ ಮಾಡಿದಾಗ ಏನು ಸಾಧ್ಯ ಎಂಬುದನ್ನು ತೋರಿಸುತ್ತದೆ. “ತಂತ್ರಜ್ಞಾನವು ಲಾಭದ ಬದಲು ಜನರಿಗೆ ಸೇವೆಯನ್ನು ಸಲ್ಲಿಸಿದಾಗ, ಇಡೀ ಸಮಾಜವೇ ಅಭಿವೃದ್ಧಿಯಾಗಿತ್ತದೆಎಂದು ಹೇಳಿದರು.


