ಕಾಲ್ ಮಾಡಿದಾಗ ಪಿಕ್ ಮಾಡಿಲ್ಲವೆಂದು ಸಿಟ್ಟಿಗೆದ್ದ ಗಂಡನೊಬ್ಬ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಸಾಕ್ಷ್ಯ ನಾಶಕ್ಕಾಗಿ ಕುದಿಯುವ ಎನ್ನೆ ಸುರಿದಿರುವ ಘಟನೆ ಬೆಂಗಳೂರಿನ ಮೈಕೋ ಲೇಔಟ್ ಸಮೀಪ ಬಿಳೇಕಹಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ಆರೋಪಿ, ಪತ್ನಿ ಗುಂಜಾ ಮದೇಷಿಯಾ (38) ಜೊತೆ ಮೈಕೋ ಲೇಔಟ್ನ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ವಿಚಾರವಾಗಿ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ಮತ್ತೆ ಗಲಾಟೆ ಶುರುವಾಗಿದೆ.
ಆಕ್ರೋಶಗೊಂಡ ರಂಜಿತ್ ಪತ್ನಿ ಮೇಲೆ ಹಲ್ಲೆ ನಡೆಸಿ ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕಸ್ಮಿಕ ಸಾವು ಎಂದು ಬಿಂಬಿಸಲು ದೇಹದ ಮೇಲೆ ಬಿಸಿ ಎಣ್ಣೆ ಎರಚಿ ಚರ್ಮ ಸುಲಿಯಲು ಯತ್ನಿಸಿದ್ದಾನೆ. ದಂಪತಿಯ ಜಗಳದ ಬಗ್ಗೆ ಮನೆ ಮಾಲೀಕರು ನೀಡಿದ ಮಾಹಿತಿ ಅನ್ವಯ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಚಾರ ಹೊರ ಬಂದಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೋಪದ ಕೈಗೆ ಬುದ್ಧಿಕೊಟ್ಟ ಆರೋಪಿಯ ಮಕ್ಕಳೀಗ ತಂದೆ, ತಾಯಿ ಇಬ್ಬರೂ ಇಲ್ಲದೆ ಅನಾಥರಾಗಿದ್ದಾರೆ.
ಕುಡಿದ ಮತ್ತಲ್ಲಿ ತಾಯಿಯ ಕೊಲೆಗೈದ ಮಗ
ಕುಡಿದ ಮತ್ತಿನಲ್ಲಿ ಮಗನೊಬ್ಬ ತಾಯಿಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಆರನೇಕಲ್ಲು ಗ್ರಾಮದಲ್ಲಿ ನಡೆದಿದೆ. ಪ್ರೇಮ (60) ಮಗನಿಂದ ಕೊಲೆಯಾದ ಮಹಿಳೆ. ಆನಂದ್ ಕೊಲೆ ಮಾಡಿದ ಮಗ.
ರಾತ್ರಿ ಕುಡಿದ ಮತ್ತಿನಲ್ಲಿ ತಾಯಿಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾನೆ, ಕೊಲೆ ಮಾಡಲು ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಹದಡಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.


