ಎರಡು ಮಕ್ಕಳ ತಾಯಿ ಮದುವೆಯಾಗುವುದಾಗಿ ಹೇಳಿದ್ದನ್ನು ನಂಬಿ ಪ್ರೀತಿಗಾಗಿ ಆಕೆಯ ಹಿಂದೆ ಬಿದ್ದ ಟ್ಯಾಟೂ ಕಲಾವಿದ ಹಾಗೂ ನಟನಿಗೆ ಆಕೆಯಿಂದ ಲಕ್ಷಾಂತರ ರೂ. ವಂಚನೆ ಮಾತ್ರವಲ್ಲದೆ ಹಲ್ಲೆಗೂ ಒಳಗಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಪ್ರಿತಾ ಎಂಬ ಮಹಿಳೆ ಲಕ್ಷಾಂತರ ರೂಪಾಯಿ ಪಡೆದು ವಾಪಸ್ ನೀಡದೆ ವಂಚಿಸಿರುವುದಾಗಿ ಆರೋಪಿಸಿ ಘೋಸ್ಟ್ ಟ್ಯಾಟೂ ಆರ್ಟಿಸ್ಟ್ ಖ್ಯಾತಿಯ ಅರ್ಜುನ್ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾನೆ. ಮಹಿಳೆ ಬೇರೆ ಪುರುಷನೊಂದಿಗೆ ವೀಡಿಯೊ ಕಾಲ್ನಲ್ಲಿದ್ದಾಗ ಕಲಾವಿದನ ಕೈಗೆ ಸಿಕ್ಕಿಬಿದ್ದಿದ್ದು, ಆ ಬಗ್ಗೆ ಪ್ರಶ್ನಿಸಿದಾಗ ಆತನ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.
ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಮಹಿಳೆ ಪರಿಚಯವಾಗಿದ್ದಳು. ಗಂಡ ಕಾರಣಾಂತರಗಳಿಂದ ಮೃತಪಟ್ಟಿದ್ದಾಗಿ ಹೇಳಿದ್ದಳು. ಪರಿಚಯ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಅರ್ಜುನ್ಗೆ ಪತ್ನಿಯಿಂದ ಡಿವೋರ್ಸ್
ಆಗಿತ್ತು. ಮಹಿಳೆ ಮದುವೆಯಾಗುವುದಾಗಿ ನಂಬಿಸಿದ್ದರಿಂದ ಹಲವು ಬಾರಿ ಅರ್ಜುನ್ ಹಣ ಕೊಟ್ಟಿದ್ದ. ಕಳೆದ ಒಂದು ವರ್ಷದಿಂದ ಮದುವೆ ಮುಂದೂಡಿದ್ದಳು.
ಇತ್ತೀಚೆಗೆ ಅರ್ಜುನ್ ಮಹಿಳೆಗೆ ಕರೆ ಮಾಡಿದ್ದ. ಕರೆ ಸ್ವೀಕರಿಸದ ಹಿನ್ನಲೆ ಮನೆ ಬಳಿ ತೆರಳಿದ್ದ. ಆಗ ಮಹಿಳೆ ಬೇರೆ ಪುರುಷನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದಳು, ಪ್ರಶ್ನಿಸಿದ್ದಕ್ಕೆ ಜಗಳವಾಗಿ ರಾಡ್ನಿಂದ ಹಲ್ಲೆ ಮಾಡಿದ್ದಳು.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


