ಹಾಸನದಲ್ಲಿ ಚನ್ನಕೇಶವ ದೇವಾಲಯದ ಹುಂಡಿ ಎಣಿಕೆ ವೇಳೆ ಹಣ ಕಳವು ಮಾಡಿರುವ ಆರೋಪದಡಿ ಪೊಲೀಸರು ವಿಡಿಯೋಗ್ರಾಫರ್ ನೀಲಕಂಠ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಹುಂಡಿಕ ಎಣಿಕೆ ವೇಳೆ ವಿಡಿಯೋಗ್ರಾಫರ್ ಹಣ ಕದ್ದ ಆರೋಪವಿದ್ದು, ಇದರ ಹಿಂದೆ ಅಧಿಕಾರಿಗಳ ಪಾತ್ರ ಇದೆಯಾ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳ್ಳತನ ಆಗಿರುವುದು ಪತ್ತೆಯಾಗಿದೆ. ಪ್ರವಾಸಿಯೊಬ್ಬರು ಇದನ್ನು ನೋಡಿದ್ದಾರೆ. ಆರೋಪಿ ಜರ್ಕಿನ್ನಲ್ಲಿ ಗುರುತನ್ನು ಮರೆಮಾಚಿ ಒಂದು ಲಕ್ಷ 98 ಸಾವಿರ ರೂ. ಕಳ್ಳತನ ಮಾಡಿದ್ದಾನೆ. ಹಣ ಎಣಿಕೆ ಸಂದರ್ಭದಲ್ಲಿ ವಿಡಿಯೋಗ್ರಾಫಿ ಮಾಡಿದ್ದು, ಆ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ನೀಡಿದ್ದೇವೆ. ಪೊಲೀಸರು ಎಫ್ಐಆರ್ ಮಾಡಿ ಮುಂದಿನ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಇಂತಹ ಕೃತ್ಯಗಳು ನಡೆದಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಹುಂಡಿ ಎಣಿಸುವ ವೀಡಿಯೊ ಮಾಡಲೆಂದು ಕರೆಸಿದವನಿಂದಲೇ ಕಳ್ಳತನ ನಡೆದಿರುವುದನ್ನು ಪೊಲೀಸ್ ಪೇದೆ ಗಮನಿಸಿ ಸಂಬಂಧಪಟ್ಟವರಿಗೆ ತಿಳಿಸಿದ್ದರು. ಸ್ಥಳೀಯರು, ದೇವಾಲಯ ಆಡಳಿತ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೈವಾಡ ಈ ಕಳ್ಳತನದ ಹಿಂದೆ ಇರುವ ಸಂಶಯ ವ್ಯಕ್ತಪಡಿಸಿದ್ದಾರೆ.


