ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಐತಿಹಾಸಿಕ ಕೆಂಪು ಕೋಟೆಯಲ್ಲಿ ಸಿದ್ಧತೆಗಳು ಬಿರುಸಾಗಿವೆ. ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಜುಲೈ 15 ರಿಂದ ಆಗಸ್ಟ್ 15, 2026 ರವರೆಗೆ ಕೆಂಪು ಕೋಟೆಯನ್ನು ಸಾರ್ವಜನಿಕ ಪ್ರವೇಶಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಪ್ರಧಾನಮಂತ್ರಿಕೆಂಪು ಕೋಟೆಯ ಪ್ರಾಕಾರದಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವುದು ಮತ್ತು ಧ್ವಜಾರೋಹಣ ನೆರವೇರಿಸುವುದು ಭಾರತದ ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆ. ಈ ಕಾರ್ಯಕ್ರಮದ ಸುಗಮ ನಿರ್ವಹಣೆಗಾಗಿ ಕಳೆದ ಹಲವು ವರ್ಷಗಳಿಂದ ಕೆಂಪು ಕೋಟೆಯನ್ನು ಒಂದು ತಿಂಗಳ ಕಾಲ ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ವೇದಿಕೆ ನಿರ್ಮಾಣ, ಬಿಗಿ ಭದ್ರತಾ ಪರಿಶೀಲನೆ, ಸಾಂಸ್ಕೃತಿಕ ತಾಲೀಮು ಮತ್ತು ಅತ್ಯಾಧುನಿಕ ತಾಂತ್ರಿಕ ಅಳವಡಿಕೆಗಳನ್ನು ಕೈಗೊಳ್ಳಲಾಗುತ್ತದೆ.
ಈ ಒಂದು ತಿಂಗಳ ಕಾಲ ಕೋಟೆಯ ಒಳಗೆ ದೇಶೀಯ ಅಥವಾ ವಿದೇಶಿ ಯಾವುದೇ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ. ಪ್ರವಾಸಿಗರು ಅತೀವವಾಗಿ ಇಷ್ಟಪಡುವ ಸಂಜೆಯ “ಜೈ ಹಿಂದ್” ಶಬ್ದ ಮತ್ತು ಬೆಳಕಿನ ಪ್ರದರ್ಶನವನ್ನೂ ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವ ಸಮಾರಂಭಗಳು ಮುಗಿದ ನಂತರ, ಸ್ಮಾರಕವನ್ನು ಮತ್ತೆ ಎಂದಿನಂತೆ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಎಎಸ್ಐ ತಿಳಿಸಿದೆ.
ಈ ಅವಧಿಯಲ್ಲಿ ದೆಹಲಿಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ತಮ್ಮ ವೇಳಾಪಟ್ಟಿಯನ್ನು ಬದಲಾಯಿಸಿಕೊಳ್ಳುವಂತೆ ಅಧಿಕಾರಿಗಳು ಕೋರಿದ್ದಾರೆ.


