ಆಫ್ರಿಕದಲ್ಲಿ ಎಬೋಲಾ ವೈರಸ್ ವೈರಸ್ ಹರಡುತ್ತಿದ್ದು, ಜಾಗತಿಕವಾಗಿ ಆರೋಗ್ಯ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಇದಕ್ಕೆ ಈವರೆಗೆ ಅಧಿಕೃತ ಚಿಕಿತ್ಸೆ, ನಿರ್ದಿಷ್ಟ ಲಸಿಕೆ ಇಲ್ಲ. ಸಾವಿನ ಪ್ರಮಾಣವೂ ಹೆಚ್ಚು. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ತುರ್ತುಸ್ಥಿತಿ ಘೋಷಿಸಿದ್ದು, ಭಾರತದಲ್ಲೂ ಆತಂಕ ಎದುರಾಗಿದೆ.
ಈ ವೈರಸ್ ಕೋವಿಡ್ನಂತೆ ಗಾಳಿಯಲ್ಲಿ ಹರಡದಿದ್ದರೂ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಮತ್ತು ಕ್ವಾರಂಟೈನ್ ಅಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಎಬೋಲಾ ಬುಂಡಿಬುಗ್ಯೊ ತಳಿಗೆ ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ವೈರಸ್ ಸೋಂಕು ಬಂದರೆ ಸಾವಿನ ಪ್ರಮಾಣ ಹೆಚ್ಚು. ಕೋವಿಡ್ ರೀತಿ ಅತಿ ವೇಗವಾಗಿ ಹರಡುವ ಸಾಧ್ಯತೆ ಕಮ್ಮಿ. ವೈರಸ್ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಸೋಂಕಿತರ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕ ಕಾರಣವಾಗುತ್ತದೆ.
ಕಾಂಗೋ, ಉಗಾಂಡ ಮತ್ತು ಇತರ ಆಫ್ರಿಕ ದೇಶಗಳಿಂದ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಸ್ಕ್ರೀನಿಂಗ್ ಜೊತೆಗೆ ಅಗತ್ಯವಿದ್ದರೆ ಕ್ವಾರಂಟೈನ್ ವ್ಯವಸ್ಥೆ ಮಾಡುವುದು ಅತ್ಯಂತ ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.
ಸೋಂಕು ತಗುಲಿದ ಆರಂಭದಲ್ಲಿ ತೀವ್ರ ಜ್ವರ, ತಲೆನೋವು, ಮೈಕೈನೋವು, ವಾಂತಿ ಮತ್ತು ಭೇದಿ ಕಂಡುಬರುತ್ತದೆ. ತೀವ್ರತೆ ಪಡೆದರೆ ಲಿವರ್ ಮತ್ತು ಲಂಗ್ಸ್ ವೈಫಲ್ಯ ಸಂಭವಿಸಿ ಸಾವು ಬರಬಹುದಾಗಿದೆ.


