ರಿಯಲ್ ಎಸ್ಟೇಟ್ ಮಾಫಿಯಾಗಾಗಿ ನಡೆಯುತ್ತಿರುವ ಬಿಡದಿ ಟೌನ್ಶಿಪ್ ಯೋಜನೆಯ ವಿರುದ್ಧ ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟ ನಡೆಸಲಿದೆ. ಸದನದ ಒಳಗೆ ಹಾಗೂ ಹೊರಗೆ ಒಟ್ಟಾಗಿ ಹೋರಾಟ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ವಿರೋಧ ಕಟ್ಟಿಕೊಂಡು ಕಾಂಗ್ರೆಸ್ ಸರ್ಕಾರ ಬಿಡದಿ ಟೌನ್ಶಿಪ್ ಯೋಜನೆ ಜಾರಿ ಮಾಡಿದೆ. ಇದರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ನಿಂದ ಪಾದಯಾತ್ರೆ ನಡೆಯಲಿದೆ. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಒಂದಾಗಿ ಹೋರಾಟ ಮಾಡಲು ಮಾತುಕತೆ ನಡೆದಿದೆ. ಈ ಬಗ್ಗೆ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ನಡೆಯಲಿದೆ. ಶನಿವಾರ ಸಮನ್ವಯ ಸಭೆ ನಡೆಯಲಿದ್ದು, ಈ ಕುರಿತು ಚರ್ಚಿಸಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗುವುದು. ಯಾವುದೇ ಕಾಮಗಾರಿಗೂ ಕಾಂಗ್ರೆಸ್ ಸರ್ಕಾರ ಕಮಿಶನ್ ಫಿಕ್ಸ್ ಮಾಡಿದೆ. ಕಟ್ಟಡ ನಿರ್ಮಾಣದಲ್ಲಿ ಒಂದು ಚದರ ಅಡಿಗೆ 100 ರೂ. ನಂತೆ ಕಮಿಶನ್ ಪಡೆಯಲಾಗುತ್ತಿದೆ. ಆದ್ದರಿಂದ ಇದರ ವಿರುದ್ಧ ಹೋರಾಟ ಮಾಡಲು ತೀರ್ಮಾನ ಮಾಡಲಾಗುವುದು ಎಂದರು.
ಕೆಪಿಎಸ್ಸಿ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಮಾತಾಡಿದಾಗ ಹೆಚ್ಚಿರುವ ಸದಸ್ಯರನ್ನು ಕಡಿತಗೊಳಿಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಒಂದೊಂದೇ ಹಗರಣ ಬಯಲಾಗುತ್ತಿದೆ. ಪಶು ವೈದ್ಯಾಧಿಕಾರಿ ಹುದ್ದೆಯಲ್ಲಿ ಭಾರಿ ಮೊತ್ತದ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ನಾಯಕರ ಕುಟುಂಬದವರೇ ಇದರಲ್ಲಿ ತುಂಬಿಕೊಂಡಿದ್ದಾರೆ. 1-2 ಕೋಟಿ ರೂ. ಕೊಟ್ಟವರಿಗೆ ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಆಡಿಯೋಗಳೂ ಬಂದಿವೆ ಎಂದು ಹೇಳಿದರು.
ಸಿಎಂ ಡಿಕೆ.ವಕುಮಾರ್ ಅವರ ಹೊಸ ಸಂಪುಟ ಪೇಮೆಂಟ್ ಸಂಪುಟವಾಗಿದೆ. ಅಕ್ರಮ ಮಾಡಿದವರು ಮತ್ತೆ ಸಚಿವರಾಗಿದ್ದಾರೆ. ಆರ್.ಬಿ.ತಿಮ್ಮಾಪುರ ಅವರ ಆಡಿಯೋ ಹೊರಬಂದಿದೆ. 20-30 ಕ್ಕೂ ಅಧಿಕ ಶಾಸಕರು ರಾಜೀನಾಮೆ ನೀಡುವ ಹಾಗೂ ವಾಪಸ್ ಪಡೆಯುವ ನಾಟಕ ನಡೆದಿದೆ. ಸುರ್ಜವೇಲಾ ಅವರು ಶಾಸಕರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಎಲ್ಲ ಶಾಸಕರು ಇದರ ವಿರುದ್ದ ಇದ್ದಾರೆ. ಹಣ ಕೊಟ್ಟು ಸಚಿವರಾದವರು ಜನರಿಂದಲೇ ಆ ಹಣ ವಸೂಲಿ ಮಾಡುತ್ತಾರೆ. ಇನ್ನು ಮುಂದೆ ಕಮಿಶನ್ ಪ್ರಮಾಣ 60% ರಿಂದ 80% ಕ್ಕೆ ಏರಲಿದೆ. ಹೈಕಮಾಂಡ್ ಬಾಗಿಲು ತಟ್ಟಲು ಕೂಡ ಲಂಚ ಕೊಡಬೇಕಾಗುತ್ತದೆ ಎಂದರು.
ಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷರ ಹೆಸರು ಕಾಂಗ್ರೆಸ್ ಪಟ್ಟಿಯಲ್ಲಿ ಬಂದಾಗಲೇ ಅದರ ಪಾವಿತ್ರ್ಯತೆ ಹಾಳಾಗಿದೆ. ಈ ಎರಡೂ ಸಂವಿಧಾನದ ಹುದ್ದೆಗಳು ಪಕ್ಷಾತೀತವಾಗಿರಬೇಕು. ಈಗ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಪಡೆಯುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ. ಕಾಂಗ್ರೆಸ್ಗೆ ಹಿಂದೂ ಎಂದರೆ ಆಗಲ್ಲ. ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಕಾಂಗ್ರೆಸ್ ಬೆಂಬಲಿಸುತ್ತದೆ. ಹಿಂದುತ್ವದ ಬಗ್ಗೆ ಅವರು ಮಾತಾಡಬಾರದು ಹಾಗೂ ಅವರಿಗೆ ಯಾವುದೇ ನೈತಿಕತೆ ಇಲ್ಲ. ಹಿಂದು ಧರ್ಮವನ್ನು ಇವರು ವ್ಯಾಖ್ಯಾನ ಮಾಡಬೇಕಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತಾಡುವುದಾದರೆ ಅವರು ಮೊದಲು ಸಂವಿಧಾನದ ಮೌಲ್ಯಗಳನ್ನು ಪಾಲಿಸಲಿ ಎಂದು ಕಿಡಿ ಕಾರಿದರು.


