ರಾಯೂರಿನ ಬಸ್ನಿಲ್ದಾಣ ಹತ್ತಿರದ ವಿಆರ್ಎಲ್ ಕಚೇರಿ ಬಳಿ ಕಟ್ಟಡವೊಂದರ ಚಾವಣಿ ಕುಸಿದು ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ನಾಗರಾಜ್ ಕ್ಯಾದಿಗ್ಗೇರಾ (21), ರವಿ ಕುಮಾರ ಸಮುದ್ರ (22) ಸ್ಥಳದಲ್ಲಿಯೇ ಅಸು ನೀಗಿದ್ದು, ಅರ್ಜುನ್ ಎಂಬಾತ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಗಾಯಗೊಂಡಿರುವ ಪ್ರಭು ಮಾತ್ಪಳ್ಳಿ ಹಾಗೂ ಉಮೇಶ ಎಚ್.ಎನ್.ತಾಂಡಾರನ್ನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಾಜ ಕ್ಯಾದಿಗ್ಗೇರಾ ಎಂಬ ವಿದ್ಯಾರ್ಥಿ ‘ಅಂತ್ಯವಾಯ್ತು’ ಎಂಬ ಕಿರುಚಿತ್ರ ತಯಾರಿಸಿದ್ದು, ಅದೇ ಕಟ್ಟಡದ ಮೇಲ್ಭಾಗದಲ್ಲಿರುವ ಶ್ರೀ ಗುರು ಫೊಟೋ ಸ್ಟುಡಿಯೋದಲ್ಲಿ ಕೆಲಸಕ ಕಾರಣ ವಿದ್ಯಾರ್ಥಿಗಳು ತೆರಳಿದ್ದರು.
ಭಾನುವಾರ ಸ್ಟುಡಿಯೋ ಬಂದ್ ಇದ್ದುದರಿಂದ ಅವರನ್ನು ಮೊಬೈಲ್ನಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತಿರುವಾಗ ಈ ದುರಂತ ಸಂಭವಿಸಿದೆ. ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ದೇವದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


