ಕುತ್ತಿಗೆಗೆ ಹಾಕಿದ್ದ ಚಿನ್ನದ ಸರವನ್ನು ಕಸಿಯಲು ಹೋಗಿ ಸಾರ್ವಜನಿಕರಿಂದ ಗೂಸಾ ತಿಂದ ಪ್ರಕರಣ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಗಗನ್ (31) ಚಿನ್ನ ಕದಿಯಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿ.
ಪಟ್ಟಣದ ಬಿ.ಎಮ್ ರಸ್ತೆಯಲ್ಲಿರುವ ಕಿಂಗ್ಸ್ ಕಂಫರ್ಟ್ ಎಂಬ ಅತಿಥಿ ಗೃಹ ಒಂದಕ್ಕೆ ಭೇಟಿ ಕೊಟ್ಟ ಇಬ್ಬರು ಯುವಕರು ರೂಮ್ ಕೇಳುವ ನೆಪದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ನಡುವೆ ಆರೋಪಿ ಗಗನ್ ಏಕಾಏಕಿ ಮಾಲೀಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಎಗರಿಸಲು ಪ್ರಯತ್ನ ಪಟ್ಟಿದ್ದಾನೆ. ಬಳಿಕ ಮಾಲೀಕ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ ಆರೋಪಿ ಗಗನ್ ಲಾಡ್ಜ್ ಮಾಲೀಕ ರವಿಗೆ ಹಲ್ಲೆ ನಡೆಸಿದ್ದಾನೆ.
ಏನೋ ಗಲಾಟೆ ನಡೆಯುತ್ತಿದೆ ಎಂದು ರೂಮಿನಲ್ಲಿದ್ದ ಗ್ರಾಹಕ ಹೊರಗೆ ಬಂದಾಗ ಮತ್ತೊಬ್ಬ ಆರೋಪಿ ಅಭಿ ಅಲಿಯಾಸ್ ಲೋಕೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಗಗನ್ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಬೆನ್ನಟ್ಟಿ ಹೋಗಿ ಹಿಡಿದಿದ್ದಾರೆ. ಬಳಿಕ ಲಾಡ್ಜ್ ಮಾಲೀಕ ರವಿ ಮತ್ತು ಸಾರ್ವಜನಿಕರು ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿ ಠಾಣೆಗೆ ಕರೆದೊಯ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ, ರವಿ ದೂರು ನೀಡಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


