Menu

ಉತ್ತರಾಖಂಡ ಮುಖ್ಯಮಂತ್ರಿ ರಾಜಿನಾಮೆ ನೀಡಲಿ: ಸಿಎಂ ಡಿಕೆ ಶಿವಕುಮಾರ್ 

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಹಿರಂಗ ಸಭೆ ನಡೆದ ಸ್ಥಳ ‘ಶುದ್ಧೀಕರಣ’ ಮಾಡಿರುವ ಘಟನೆ ನಾಚಿಕೆಗೇಡಿನ ವಿಚಾರ. ಆ ರಾಜ್ಯದ ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದರು.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ  ಪ್ರತಿಕ್ರಿಯೆ ನೀಡಿದರು. ಉತ್ತರಾಖಂಡದ ಘಟನೆ ಬಗ್ಗೆ ಕೇಳಿದಾಗ, “ಈ ಘಟನೆ ಬಗ್ಗೆ ಈಗಾಗಲೇ ಟ್ವೀಟ್ ಮಾಡಿದ್ದು, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವಂತದ್ದು. ಇಡೀ ದೇಶ ಅರ್ಥ ಮಾಡಿಕೊಳ್ಳಬೇಕು. ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ವಿರೋಧ ಪಕ್ಷದ ನಾಯಕರು ಮಾತ್ರವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಹಾಗೂ ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ  ಕೂತಿದ್ದ ಸ್ಥಾನದಲ್ಲಿರುವ ನಾಯಕ ಎಂದರು.

ಇಡೀ ವ್ಯವಸ್ಥೆಯಲ್ಲಿ ಇಂತಹ ತಾರತಮ್ಯ ಹಾಗೂ ಅಪಮಾನ ಆಗಬಾರದು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೋರಾಟ ಮಾಡಿ ಸಂವಿಧಾನ ನೀಡಿದ್ದಾರೆ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಇದಾಗಿದ್ದು, ಜಾತೀಯತೆ, ಕೋಮುವಾದಿ ವಿಚಾರ ನಮಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಬಿಜೆಪಿ ನಾಯಕರ ಕೃತ್ಯ, ಇಡೀ ದೇಶದ ದಲಿತರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

ಪ್ರತಿಯೊಬ್ಬ ಭಾರತೀಯನಿಗೆ ಮಾಡಿದ ಅಪಮಾನ. ಈ ಬಗ್ಗೆ ಬಿಜೆಪಿ ನಾಯಕರು, ದೇಶದ ಪ್ರಧಾನಮಂತ್ರಿಗಳು ಉತ್ತರಿಸಬೇಕು. ಇಂತಹ ಅಪಮಾನ ಬಿಜೆಪಿ ನಾಯಕರು ಹಾಗೂ ಮಂತ್ರಿಗಳಿಗೆ ಆಗಿದ್ದರೆ ಅವರು ಯಾವ ರೀತಿ, ವರ್ತಿಸುತ್ತಿದ್ದರು? ಖರ್ಗೆ ಅವರಿಗೆ ಆಗಿರುವ ಅಪಮಾನ ಸಹಿಸಲು ಸಾಧ್ಯವಿಲ್ಲ. ಈ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ತನಿಖೆ ಮಾಡಲಾಗುವುದು ಎಂಬ ಜೆಪಿ ನಡ್ಡಾ ಅವರು ಹೇಳಿರುವ ಬಗ್ಗೆ ಕೇಳಿದಾಗ, ಎಲ್ಲಾ ಚಿತ್ರಗಳು ಹೊರಬಂದಿವೆಯಲ್ಲ, ಇದರಲ್ಲಿ ತನಿಖೆ ಮಾಡುವುದು ಏನಿದೆ? ಏನೇ ಇದ್ದರು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಆರ್ ಎಸ್ ಎಸ್ ಸಂಘಟನೆ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕು ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆಯೇ ಎಂದು ಕೇಳಿದಾಗ, ಹಾಗೇನೂ ನಿರ್ದಿಷ್ಟ ಸಂಘ, ಸಂಸ್ಥೆ ಬಗ್ಗೆ ಚರ್ಚೆ ಆಗಿಲ್ಲ. ಆದರೆ ಯಾವುದೇ ಪಕ್ಷದವರು, ಸಂಘಟನೆ ಆದರೂ ಕಾರ್ಯಕ್ರಮ ಮಾಡುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಅನುಮತಿ ಒಡೆಯುವುದು ವಾಡಿಕೆ. ಇದರಿಂದ ಪೊಲೀಸ್ ಬಂದೋಬಸ್ತ್ ಮಾಡಲು ಅನುಕೂಲ ಆಗುತ್ತದೆ. ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಫ್ರೀಡಂ ಹಬ್ಬ ಮಾಡುತ್ತಿದ್ದು, ಅದಕ್ಕೂ ಅನುಮತಿ ಪಡೆಯಬೇಕು ಎಂದರು.

Related Posts

Leave a Reply

Your email address will not be published. Required fields are marked *