ಪತ್ನಿಯ ಮೇಲೆ ಅನುಮಾನವುಂಟಾಗಿದ್ದಕ್ಕೆ ಮನೆಯೊಳಗೆ ಜಿಲೆಟಿನ್ ಕಡ್ಡಿ ಸ್ಫೋಟಿಸಿದ ವ್ಯಕ್ತಿ ಮತ್ತು ಆತನ ಮಗಳು ಮೃತಪಟ್ಟಿದ್ದಾರೆ. ಆಳಂದ ತಾಲೂಕಿನ ಮಟಕಿ ತಾಂಡದಲ್ಲಿ ನಡೆದ ಈ ದುರಂತದಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ ಮಾಡಿದ ವ್ಯಕ್ತಿಯ ಪತ್ನಿ ಹಾಗೂ ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದಾರೆ.
ಶಿವಲಾಲ್ ಬಳಿರಾಮ್ ರಾಠೋಡ್ (50) ಹಾಗೂ ಮೀರಾ (15) ಮೃತಪಟ್ಟವರು. ಶಿವಲಾಲ್ ಹೆಂಡತಿ ಮೇಲೆ ಅನುಮಾನ ಅನುಮಾನ ಪಡುತ್ತಿದ್ದ. ತಾನು ಕೆಲಸ ಮಾಡುತ್ತಿದ್ದ ಕಲ್ಲು ಕ್ವಾರಿಯಿಂದ ಜಿಲೆಟಿನ್ ಕಡ್ಡಿ ಮನೆಗೆ ತಂದು ಎಲ್ಲರೂ ಇರುವಾಗಲೇ ಬ್ಲಾಸ್ಟ್ ಮಾಡಿದ್ದಾನೆ.
ಆತನ ಪತ್ನಿ ಸವಿತಾ ಹಾಗೂ ಮನೆಯಲ್ಲಿದ್ದ ಪ್ರಕಾಶ್, ಸುರೇಖಾ ಹಾಗೂ ವಿವೇಕ್ ಗಂಭಿರವಾಗಿ ಗಾಯಗೊಂಡಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಎಕರೆಗಾಗಿ ಅಣ್ಣನ ಕೊಲೆಗೈದ ತಮ್ಮ
ಹಾವೇರಿಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಒಂದು ಎಕರೆ ಆಸ್ತಿಗಾಗಿ ತಮ್ಮನೇ ಅನ್ಣನ ಕೊಲೆ ಮಾಡಿರುವ ಘಟನೆ ನಡೆದಿದೆ. ಸಂತೋಷ ಸವಣೂರು (31) ಕೊಲೆಯಾದವರು, ಕಿರಿಯ ಸಹೋದರ ಕುಮಾರ ಸವಣೂರು ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಮೃತನ ಸೋದರಮಾವ (ತಾಯಿಯ ತಮ್ಮ) ಅಕ್ಕ ಹಾಗೂ ಮಕ್ಕಳಿಗಾಗಿ ಒಂದು ಎಕರೆ ಜಮೀನು ನೀಡಿದ್ದು, ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಈ ಜಮೀನು ಸೇರುತ್ತದೆ ಎಂದು ಹೇಳಿದ್ದರು.
ಮೃತ ಸಂತೋಷ ಊರಲ್ಲೇ ಕೂಲಿ ಕೆಲಸ ಮಾಡುತ್ತಾ ಜಮೀನನ್ನೂ ನೋಡಿಕೊಳ್ಳುತ್ತಿದ್ದ. ಹೊರಗೆ ಕೆಲಸ ಮಾಡುತ್ತಿದ್ದ ತಮ್ಮ ಕುಮಾರ ಮಾತ್ರ ಸ್ನೇಹಿತರೊಂದಿಗೆ ಸೇರಿ ಕುಡಿತದ ಚಟಕ್ಕೆ ಬಿದ್ದು, ಜಮೀನನ್ನು ತನಗೆ ಬಿಟ್ಟುಕೊಡುವಂತೆ ಜಗಳ ತೆಗೆಯುತ್ತಿದ್ದ.
ಅಣ್ಣ ಸಂತೋಷ ಮತ್ತು ತಮ್ಮ ಕುಮಾರ ಇಬ್ಬರೂ ತಡರಾತ್ರಿ ಸಮೀಪದ ಬಾರ್ಗೆ ತೆರಳಿ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಊಟ ಮಾಡಿ ಸಂತೋಷ ಮನೆಯ ಕಟ್ಟೆಯ ಮೇಲೆ ಮಲಗಿದ್ದಾಗ, ಕುಮಾರ ಜಗಳಕ್ಕೆ ಬಂದಿದ್ದ.
ಮನೆ ಅಂಗಳದಲ್ಲೇ ತಾಯಿಯ ಕಣ್ಣೆದುರೇ ಕಟ್ಟೆಯ ಮೇಲೆ ಮಲಗಿದ್ದ ಅಣ್ಣ ಸಂತೋಷನ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.


