ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನು ವ್ಯಕ್ತಿ ಕೊಲೆ ಮಾಡಿರುವ ಘಟನೆಯು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದ್ದು, ಮೂರು ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದೆ.
ಪ್ರೇಯಸಿಯನ್ನು ಕೊಲೆ ಮಾಡಿರುವ ಆರೋಪಿಯು ಆಕೆಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣ ಪಡೇತನ್ನವರ್ ಮೃತ ಮಹಿಳೆ, ಗೋಕಾಕ ತಾಲೂಕಿನ ಸಿಂಗಳಾಪೂರದ ದಿಲೀಪ್ ಗಡಕರಿ ಕೊಲೆ ಆರೋಪಿ.
ದಿಲೀಪ್ ಮತ್ತು ಅನ್ನಪೂರ್ಣ ನಡುವೆ ಪ್ರೇಮ ಸಂಬಂಧವಿತ್ತು, ಅನ್ನಪೂರ್ಣ ಮದುವೆಯಾಗುವಂತೆ ಆತನನ್ನು ಒತ್ತಾಯಿಸುತ್ತಿದ್ದಳು. ಸಿಟ್ಟಿಗೆದ್ದ ದಿಲೀಪ್ ಆಕೆಯನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ.
ಮೂರು ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣ ಬೆಳಗಾವಿಯ ಕುಲಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕೊಲೆಯಾದ ಮಹಿಳೆಯ ಕೊನೆಯ ಕರೆ ಮಾಹಿತಿಯಿಂದ ಪ್ರಕರಣದ ರಹಸ್ಯ ಬಯಲಾಗಿದೆ. ಕುಲಗೋಡ ಪೊಲೀಸರು ತನಿಖೆ ತೀವ್ರಗೊಳಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.


