ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿ ಬೆಂಗಳೂರು ಕೇಂದ್ರ ಕಾರಾಗೃಹ ಕೈದಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುವುದಕ್ಕೆ ಎಲ್ಲ ರೀತಿಯ ನೆರವು ನೀಡಿದ್ದ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿಯಿಂದ ಪೊಲೀಸರು ವಶಕ್ಕೆ ಪಡೆದಿದ್ದ ಮೊಬೈಲ್ ಮತ್ತು ಸಿಮ್ ಕಾರ್ಡ್ ಪರಿಶೀಲನೆ ತೀವ್ರಗೊಳಿಸಿದ್ದು, ಡಿಜೆ ಹಳ್ಳಿಯೊಂದಿಗೆ ಸಂಪರ್ಕ ಇರುವುದು ಪತ್ತೆಯಾಗಿದೆ. ಈ ಸಂಬಂಧ ಪ್ರತಾಪ್ ರಾವ್, ತೌಸಿಪ್, ಸಿದ್ದಿಕ್, ಪ್ರಕಾಶ್, ಮಂಜುನಾಥ್ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೈದಿ ಪ್ರಜ್ವಲ್ಗೆ ಜೈಲಿನಲ್ಲಿ ಮೊಬೈಲ್ ಸಿಗುವುದಕ್ಕೆ ಜೈಲ್ ವಾರ್ಡನ್ ಹಾಗೂ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಆರೋಪಿಗಳಾದ ಸಿದ್ದಿಕ್ ಹಾಗೂ ತೌಫಿಕ್ ನೆರವಾಗಿದ್ದರು. ಜೈಲಿನಲ್ಲಿದ್ದ ತೌಫಿಕ್ ಅನಾರೋಗ್ಯದಿಂದ ಜಯನಗರ ಆಸ್ಪತ್ರೆ ಸೇರಿದ್ದ ಸಮಯದಲ್ಲಿ ಮೊಬೈಲ್ ಖರೀದಿ ಮಾಡಿದ್ದ, ನಂತರ ಸಿದ್ದಿಕ್ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಜೈಲಿನಲ್ಲಿ ಬಳಸುತ್ತಿದ್ದರು. ಇವರಿಂದ ಪ್ರಜ್ವಲ್ ಒಂದು ಲಕ್ಷ ರೂ.ಗೆ ಮೊಬೈಲ್, 50 ಸಾವಿರ ರೂ.ಗೆ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಸಿಮ್ ಆಂಧ್ರದ ಪುಂಗನೂರಿನಲ್ಲಿ ಖರೀದಿಯಾಗಿರುವುದು ಗೊತ್ತಾಗಿದೆ. ಕಾಲ್ ಡಿಟೇಲ್ಸ್ ಚೆಕ್ ಮಾಡಿದಾಗ ಹಲವು ಯುವತಿಯರಿಗೆ, ಕುಟುಂಬಸ್ಥರಿಗೆ ಕರೆ ಮಾಡಿರುವುದು ಕೂಡ ಪತ್ತೆಯಾಗಿದೆ. ಕರೆ ಮಾಡಿ ಮಾತನಾಡಿದವರಿಗೆ ನೋಟಿಸ್ ನೀಡಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.


