ಕರ್ನಾಟಕ ಡಿಸಿಆರ್ಇ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ) ಘಟಕದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ಟೇಬಲ್ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ನೀಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಪೊಲೀಸ್ ಪ್ರಧಾನ ಕಚೇರಿಯ ಸುತ್ತೋಲೆ ಸಂಖ್ಯೆ ಆರ್ಎಲ್ಎನ್-1/14/2021, ದಿನಾಂಕ 03 ಆಗಸ್ಟ್ 2021 ಉಲ್ಲೇಖದೊಂದಿಗೆ ಈ ಆದೇಶ ಹೊರಡಿಸಲಾಗಿದೆ. ಶಿಫ್ಟ್ ಅನುಸರಿಸಿ ಪ್ರತಿಯೊಬ್ಬ ಪಿಸಿ ಹಾಗೂ ಹೆಚ್ಸಿ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಆದೇಶವನ್ನು ಸಂಬಂಧಿತ ಠಾಣಾಧಿಕಾರಿಗಳಿಗೆ ರವಾನಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ತರಲು ಸೂಚಿಸಲಾಗಿದೆ.
ಪೊಲೀಸ್ ಸಿಬ್ಬಂದಿ ನಿರಂತರ ಕರ್ತವ್ಯ ನಿರ್ವಹಿಸುವುದರಿಂದ ಉಂಟಾಗುವ ಮಾನಸಿಕ ಒತ್ತಡ ಮತ್ತು ದೈಹಿಕ ಆಯಾಸವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಾರದ ಒಂದು ದಿನ ವಿಶ್ರಾಂತಿಯಿಂದ ಸಿಬ್ಬಂದಿಯ ಆರೋಗ್ಯ ಸುಧಾರಿಸುವುದರ ಜೊತೆಗೆ ಕಾರ್ಯಕ್ಷಮತೆ ಹೆಚ್ಚಲಿದೆ ಎಂಬುದು ಇಲಾಖೆಯ ನಿರೀಕ್ಷೆ.
ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಕುಮಾರ್, ಐಪಿಎಸ್ ಅವರು ಜುಲೈ 16, 2026ರಂದು ಆದೇಶಕ್ಕೆ ಸಹಿ ಮಾಡಿದ್ದು, ಪ್ರತಿಗಳನ್ನು ಡಿಐಜಿಪಿ, ಡಿಸಿಆರ್ಇ, ಬೆಂಗಳೂರು, ಡಿಸಿಆರ್ಇ ವ್ಯಾಪ್ತಿಯ ಎಲ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕರು, ಆಡಳಿತಾಧಿಕಾರಿಗಳು, ಲೆಕ್ಕ ಶಾಖೆ ಹಾಗೂ ಸಂಬಂಧಿತ ಕಚೇರಿಗಳಿಗೆ ಕಳಿಸಲಾಗಿದೆ.


