Menu

ಅ.11 ವಿಜೃಂಭಣೆಯ ದಸರಾ ಉದ್ಘಾಟನೆ, ಅ.21ಕ್ಕೆ ಜಂಬೂ ಸವಾರಿ: ಸಿಎಂ ಡಿಕೆ ಶಿವಕುಮಾರ್‌

ನಾಡಹಬ್ಬ ದಸರಾ ಹಬ್ಬವನ್ನು ಈ ಬಾರಿ 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಸಂಸ್ಕೃತಿ ಪರಂಪರೆಗಳಿಗೆ ಅನುಗುಣವಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಾಡಹಬ್ಬ ದಸರಾ- 2026 ಆಚರಣೆ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ನಡೆದ ಪೂರ್ವಭಾವಿ ಸಭೆ ಬಳಿಕ ಶಿವಕುಮಾರ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಬಾರಿಯ ದಸರಾ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 26ರಂದು ಬೆಳಗ್ಗೆ 10 ಗಂಟೆಗೆ ಗಜಪೂಜೆ ನಡೆಯಲಿದೆ. ದಸರಾ ಉದ್ಘಾಟನೆ ಅಕ್ಟೋಬರ್ 11ರಂದು ಬೆಳಗ್ಗೆ 11.50ಕ್ಕೆ ನಿಗದಿ ಮಾಡಲಾಗಿದೆ. ಜಂಬು ಸವಾರಿ, ನಂದಿ ಪೂಜೆ ಕಾರ್ಯಕ್ರಮವನ್ನು ಅಕ್ಟೋಬರ್ 21ರಂದು ಮಧ್ಯಾಹ್ನ 1.30ಕ್ಕೆ ನಡೆಸಲಾಗುವುದು. ಜಂಬುಸವಾರಿ ಪುಷ್ಪಾರ್ಚನೆಯನ್ನು ಅಂದೇ ಸಂಜೆ 4.10ಕ್ಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಂದಿನ ಸಭೆಯಲ್ಲಿ ಅನೇಕ ಸಭೆಗಳು ಬಂದಿದೆ. ದಸರಾ ಆಯೋಜನೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾರ್ಯಕಾರಿ ಸಮಿತಿ ರಚನೆ ಮಾಡಲಿದ್ದೇನೆ. ಈ ಬಾರಿ ಏರ್ ಶೋ ನಡೆಸಲು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಬೇಕು ಎಂದು ಸಲಹೆ ಬಂದಿದೆ. ಹೀಗಾಗಿ ಈ ವಿಚಾರವಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ದಸರಾ ಉದ್ಘಾಟನೆಯನ್ನು ಯಾರ ಕೈಯಿಂದ ಮಾಡಿಸಬೇಕು ಎಂಬ ತೀರ್ಮಾನವನ್ನು ಸಮಿತಿಯು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ನಾನು ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇನೆ ಎಂದು ತಿಳಿಸಿದರು.

ಐತಿಹಾಸಿಕ ಮೈಸೂರು ದಸರಾ ಪಾರಂಪರಿಕ ಉತ್ಸವವಾಗಿದ್ದು, ನಮ್ಮ ರಾಜ್ಯದ ಹೆಮ್ಮೆ. ಪ್ರತಿ ವರ್ಷ ಉತ್ಸವದ ಸ್ವರೂಪ ಬದಲಾಗುತ್ತಿದೆ. ಹೊಸ ಹೊಸ ಆಲೋಚನೆ, ಆವಿಷ್ಕಾರಗಳೊಂದಿಗೆ ಕಾರ್ಯಕ್ರಮ ಅಳವಡಿಸಲು ಬೇಡಿಕೆ ಬರುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿಗೆ ತಕ್ಕ ಹಾಗೆ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಕಾರ್ಯಕ್ರಮ ಮಾಡಲಾಗುವುದು. ಬರಗಾಲ ಎಂಬ ಕಾರಣಕ್ಕೆ ಸ್ವಲ್ಪ ಹಣ ಉಳಿಸಲು ಹೋಗಿ ನಮ್ಮ ಸಂಸ್ಕೃತಿ ಪರಂಪರೆಯ ವೈಭವವನ್ನು ಕಡಿಮೆ ಮಾಡುವುದು ಬೇಡ. ಬರಗಾಲ ಕಾರಣದಿಂದ ದಸರಾ ನಿಲ್ಲಿಸೋ, ಸರಳವಾಗಿ ಆಚರಣೆ ಮಾಡೋ ಪ್ರಶ್ನೆಯೇ ಇಲ್ಲ ಎದು ಹೇಳಿದರು.

ಮೂರು ವರ್ಷಗಳಿಂದ ನಮ್ಮ ಸರ್ಕಾರ ಚೆಸ್ಕಾಂ ಮೂಲಕ ಮೈಸೂರು ನಗರದಲ್ಲಿ ದೀಪಾಲಂಕಾರ ಮಾಡಿ ವೈಭವಯುತವಾಗಿ ಆಚರಣೆ ಮಾಡುತ್ತಿದ್ದೇವೆ. ಶಕ್ತಿ ಯೋಜನೆ ನಿಮಿತ್ತ ಪ್ರವಾಸಿಗಳ ಸಂಖ್ಯೆ ಹೆಚ್ಚಾಗಿದೆ. ಶಕ್ತಿ ಯೋಜನೆಯಿಂದಾಗಿ ಕಳೆದ ಎರಡು ಮೂರು ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ರಾಷ್ಟ್ರಮಟ್ಟದ ಗಾಯಕರನ್ನು ಕರೆಸಿ ಕಾರ್ಯಕ್ರಮ ಮಾಡಲಾಗಿದೆ. ಈ ಬಾರಿಯ ಆಚರಣೆಗೆ ಸಂಬಂಧಿಸಿದಂತೆ ಮೈಸೂರಿನ ಶಾಸಕರಾದ ತನ್ವೀರ್ ಸೇಠ್, ಶ್ರೀವತ್ಸ, ಹರೀಶ್ ಗೌಡರು, ಜಿ.ಟಿ ದೇವೇಗೌಡರು, ಮಹದೇವಪ್ಪ ಸಹಕಾರ ನೀಡಿದ್ದಾರೆ. ಸಂಸತ್ ಸದಸ್ಯರು ಅನೇಕ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

“ಸಮಿತಿ ರಚನೆ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಡಬೇಕು. ಇದರಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ. 8 ವರ್ಷ ಸಿದ್ದರಾಮಯ್ಯಮುಖ್ಯಮಂತ್ರಿಯಾಗಿ ಈ ಹಬ್ಬವನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ. ನಾವು ಇನ್ನಷ್ಟು ಉತ್ತಮವಾಗಿ ಮುಂದುವರಿಸಿಕೊಂಡು ಹೋಗೋಣ ಎಂದು ನಮ್ಮ ಸಹೋದ್ಯೋಗಿಗಳಾದ ಪರಮೇಶ್ವರ್, ಜಾರ್ಜ್, ಯತೀಂದ್ರ ಸಲಹೆ ನೀಡುತ್ತಿದ್ದಾರೆ. ಈ ಬಾರಿಯೂ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ವಿಜೃಂಭಣೆ ಎಂದರೆ ಹಣ ವೆಚ್ಚ ಮಾಡುವುದಷ್ಟೇ ಅಲ್ಲ. ಹೊಸ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡು ಪರಂಪರೆಯನ್ನು ಉಳಿಸಿಕೊಂಡು ಹೋಗುವುದಾಗಿದೆ ಎಂದರು.

ಈ ವರ್ಷ ಬರಗಾಲದ ಛಾಯೆ ಕಾಣುತ್ತಿದ್ದು, ಕಲಬುರ್ಗಿ, ಬೆಳಗಾವಿ ವಿಭಾಗದ ಪ್ರವಾಸ ಮಾಡಿದ್ದೇನೆ. ಬೆಳಗಾವಿ ಭಾಗದಲ್ಲಿ ಸ್ವಲ್ಪ ಮಳೆಯಾಗಿದೆ. ಕಳೆದ ಒಂದು ವಾರದಲ್ಲಿ ಚೇತರಿಕೆಯಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗುವ ಆತಂಕವಿತ್ತು. ಆದರೆ ಕಳೆದ ಒಂದು ವಾರದ ಮಳೆಯಿಂದ ಆತಂಕ ತಪ್ಪಿದೆ. ಎಷ್ಟೇ ಕಷ್ಟವಾದರೂ ಕುಡಿಯುವ ನೀರು ಪೂರೈಕೆಗೆ ನೀರು ಲಭ್ಯವಿದೆ. ಈ ಬಾರಿ ನಮಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ರೈತರು ತಮ್ಮ ಬೇಡಿಕೆ ಇಟ್ಟಿದ್ದಾರೆ. ಪರಿಸ್ಥಿತಿ ಹಾಗೂ ಕಾನೂನು ಚೌಕಟ್ಟು ನೋಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಈ ಬಾರಿ ಏನೆಲ್ಲಾ ಬದಲಾವಣೆಯಾಗಲಿದೆ ಎಂದು ಕೇಳಿದಾಗ, ನಮ್ಮ ರಾಜ್ಯದಲ್ಲಿ ಏನೆಲ್ಲಾ ಸಂಪ್ರದಾಯವಿದೆ, ಅವುಗಳನ್ನು ಪರಿಶೀಲಿಸುತ್ತೇವೆ. ಈ ವಿಚಾರವಾಗಿ ಸಲಹೆಗಳು ಬಂದಿದ್ದು, ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ಗಾಯಕರ ಕಾರ್ಯಕ್ರಮ, ಕ್ರೀಡೆಗಳು, ಹಿಂದೂ ಸಂಪ್ರದಾಯದಂತೆ ಮಾಡುವ ಸಲಹೆ ಬಂದಿದೆ. ಇದು ಡಿಕೆ ಶಿವಕುಮಾರ್ ಒಬ್ಬನೇ ಕೈಗೊಳ್ಳುವ ತೀರ್ಮಾನವಲ್ಲ. ಎಲ್ಲಾ ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ಉತ್ತರಿಸಿದರು.

ಗೋಲ್ಡನ್ ಪಾಸ್ ವಿತರಣೆ ವಿಚಾರವಾಗಿ ಗೊಂದಲ ಹೆಚ್ಚುವ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ಕೆಲವರು ಸಲಹೆ ನೀಡಿದ್ದು, ನಾವು ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಹೊರಗಡೆಯಿಂದ ಬರುವವರಿಗೆ ಗೌರವ ಕೊಡಬೇಕು. ಮೈಸೂರು ಆತಿಥ್ಯಕ್ಕೆ ಹೆಸರುವಾಸಿ. ಅದನ್ನು ಹಾಳುಮಾಡಿಕೊಳ್ಳುವುದು ಬೇಡ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *