ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮನೆಯೊಂದರಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು ಹತ್ತು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಲೇಖನಾ ಮೃತಪಟ್ಟ ಬಾಲಕಿ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಈ ದುರಂತ ನಡೆದಿದೆ. ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮುಳುಗುತ್ತಿದ್ದ ಮಕ್ಕಳ ರಕ್ಷಿಸಲು ಹೋಗಿ ಮಹಿಳೆಯರಿಬ್ಬರ ಸಾವು
ಕೋಲಾರ ಹೊರವಲಯದ ಅರಹಳ್ಳಿ ಕೆರೆಯಲ್ಲಿಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೋಲಾರ ನಗರದ ನಿಸಾರ್ ನಗರದ ಮೊಹಮದಿ (25) ಹಾಗೂ ಬೆಂಗಳೂರಿನ ಸಲ್ಮಾ (26) ಎಂದು ಗುರುತಿಸಲಾಗಿದೆ.
ಮಕ್ಕಳೊಂದಿಗೆ ಕೆರೆಗೆ ಬಟ್ಟೆ ತೊಳೆಯಲು ಮಹಿಳೆಯರು ಬಂದಿದ್ದರು. ಆಟವಾಡುತ್ತಾ ಮಕ್ಕಳು ನೀರಿನಲ್ಲಿ ಮುಳುಗುವ ಹಂತದಲ್ಲಿದ್ದರು. ತಕ್ಷಣ ನೀರಿಗಿಳಿದ ಮೊಹಮದಿ ಮಕ್ಕಳನ್ನು ರಕ್ಷಿಸಿದ್ದಾಳೆ. ಮಕ್ಕಳನ್ನು ರಕ್ಷಿಸಿದ ಬಳಿಕ ಆಕೆ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಆಗ ರಕ್ಷಣೆಗೆ ತೆರಳಿದ ಸಲ್ಮಾ ನೀರಿನಲ್ಲಿ ಮುಳುಗಿದ್ದಾಳೆ. ಸ್ಥಳೀಯರು ರಕ್ಷಣೆಗೆ ಬರುವರಷ್ಟರಲ್ಲಿ ಇಬ್ಬರ ಪ್ರಾಣವೂ ಹೋಗಿದೆ. ಮೊಹಮದಿ ಮನೆಯಲ್ಲಿ ಮದುವೆ ಇದ್ದ ಕಾರಣ ಸಲ್ಮಾ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿದ್ದರು. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


