ಅತ್ತೆ ಅಡುಗೆ ಕಲಿ ಎಂದು ಬುದ್ಧಿ ಮಾತು ಹೇಳಿದ್ದಕ್ಕೆ ನೊಂದುಕೊಂಡ ಸೊಸೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ಅತ್ತೆ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡ 18 ವರ್ಷದ ಯುವತಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡವಳು.
ಕೆಲವು ತಿಂಗಳ ಹಿಂದೆಯಷ್ಟೇ ಶ್ರುತಿ ಮದುವೆಯಾಗಿ ಗಂಡನ ಮನೆಗೆ ಬಂದಿದ್ದಳು, ಮನೆಯಲ್ಲಿ ಸುಮ್ಮನೆ ಇರುವ ಬದಲು ಅಡುಗೆ ಕಲಿ, ನೀನು ಅಡುಗೆ ಕಲಿತ್ರೆ ನನಗೂ ಕೆಲಸದಲ್ಲಿ ಸಹಾಯವಾಗುತ್ತದೆ ಎಂದು ಅತ್ತೆ ಹೇಳಿದ್ದಕ್ಕೆ ವಿಷ ಕುಡಿದು ಸತ್ತಿದ್ದಾಳೆ. ವಿಷ ಕುಡಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮಹಿಳೆಯ ಹತ್ಯೆಗೈದಾತನ ಪತ್ತೆ ಹಚ್ಚಿದ ಪೊಲೀಸ್ ಡಾಗ್
ಗದಗದ ಮುಂಡರಗಿ ತಾಲೂಕಿನ ಪೇಠಾಲೂರು ನಿವಾಸಿ ನೀಲವ್ವ ಎಂಬಾಕೆಯನ್ನು ಹತ್ಯೆ ಮಾಡಿದಾತನನ್ನು ಪೊಲೀಸ್ ನಾಯಿ ಪತ್ತೆ ಹಚ್ಚಿದೆ. ಗಂಡ ಮತ್ತು ಮಕ್ಕಳ ಜೊತೆ ಜೀವನ ಮಾಡುತ್ತಿದ್ದ ನೀಲವ್ವ ಜೊತೆ ಹನುಮಪ್ಪ ಸ್ನೇಹ ಬೆಳೆಸಿದ್ದ. ಆಕೆಯ ಮೇಲೆ ಕಣ್ಣಿಟ್ಟು ಎರಡು ಲಕ್ಷ ರೂ. ಕೊಟ್ಟಿದ್ದ. ಆ ಹಣವನ್ನು ವಾಪಸ್ ಕೊಡು ಎಂದು ಇತ್ತೀಚೆಗೆ ಕೇಳಲಾರಂಭಿಸಿದ್ದು, ನೀಲವ್ವ ಸ್ವಲ್ಪ ಸಮಯ ಕೊಡು ಎನ್ನುತ್ತಿದ್ದಳು. ಸಿಟ್ಟಿಗೆದ್ದ ಆತ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬಂದು ಜಗಳವಾಡಿ ಕೊಂದು ನೇಣು ಬಿಗಿದು ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದ.
ಮೃತಳ ಮಗ ಮಲ್ಲೇಶ್ ಮನೆಗೆ ಬಂದಾಗ ತಾಯಿ ಹೆಣವಾಗಿದ್ದರು. ಪೊಲೀಸ್ ಗೆ ದೂರು ನೀಡಿದ ಬಳಿಕ ಪೊಲೀಸರ ಜೊತೆ ಪೊಲೀಸ್ ಶ್ವಾನವೂ ಬಂದಿತ್ತು. ತನಿಖೆ ಶುರುವಾಗ್ತಿದ್ದಂತೆ ಪೊಲೀಸ್ ನಾಯಿ ನೇರ ಆರೋಪಿ ಹನುಮಪ್ಪನ ಮನೆ ಮುಂದೆ ಹೋಗಿ ನಿಂತಿತ್ತು. ಹನುಮಪ್ಪನನ್ನು ವಿಚಾರಣೆ ಮಾಡುತ್ತಿದ್ದಂತೆಯೇ ಸತ್ಯ ಬಾಯ್ಬಿಟ್ಟಿದ್ದಾನೆ.


