Menu

ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು: ಪ್ರಿಯಾಂಕ್‌ ಖರ್ಗೆ

ಏಪ್ರಿಲ್ 22ರಂದು ಪೆಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಪ್ರಧಾನಿ ಮೋದಿ ಬಿಹಾರ ಚುನಾವಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಜಮ್ಮು ಕಾಶ್ಮೀರ, ಆದಂಪುರ ಸೇರಿದಂತೆ ಎಲ್ಲೆಡೆ ಬ್ಲಾಕ್‌ಔಟ್ ಆಗಿದ್ದಾಗ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯ ಆಪ್ತ ಮಿತ್ರ ಎಂದು ಕರೆಯಲಾಗುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಹೇಳಿಕೆಗಳ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಭಾರತ-ಪಾಕಿ ಸ್ತಾನದ ಯುದ್ಧ ವಿರಾಮಕ್ಕೆ ತಾನೇ ಕಾರಣ ಎಂದು ಟ್ರಂಪ್ ನಾಲ್ಕು ಬಾರಿ ಹೇಳಿದ್ದಾರೆ, ಭಾರತವನ್ನು ಒಂದು ಭಯೋತ್ಪಾದಕ ರಾಷ್ಟ್ರಕ್ಕೆ ಹೋಲಿಸುತ್ತಿದ್ದಾರೆ. ವ್ಯಾಪಾರದ ಆಮಿಷ, ತೆರಿಗೆ ರಿಯಾಯಿತಿ, ಎಂಟು ಸಾವಿರ ಕೋಟಿ ಸಾಲದ ಮೂಲಕ ಏನು ಸಾಧಿಸಲು ಹೊರಟಿದ್ದಾರೆ, ಈ ಹಣವನ್ನು ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಗೆ ಬಳಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಮೋದಿ ನಮ್ಮ ವಿದೇಶಾಂಗ ನೀತಿಯನ್ನು ಟ್ರಂಪ್ ಬಳಿ ಅಡವಿಟ್ರಾ, ಟ್ರಂಪ್ ಮುಂದೆ ಮಂಡಿಯೂರಿದ್ರಾ, ಅವರು ‘ಮೈ ಫ್ರೆಂಡ್ ಮೋದಿ’ ಎಂದು ಕರೆಯುತ್ತಾ, ಯುದ್ಧವನ್ನು ತಾನೇ ನಿಲ್ಲಿಸಿದೆ ಎಂದು ಹೇಳುತ್ತಿದ್ದಾರೆ. ಟ್ರಂಪ್ ಬಳಸುವ ಭಾಷೆ ನಮ್ಮ ದೇಶದ ಬಗ್ಗೆ, ಪ್ರಧಾನಿಯವರ ಬಗ್ಗೆ ಯಾವ ರೀತಿಯದ್ದು ಎಂದು ಎಲ್ಲರೂ ಗಮನಿಸಬೇಕು ಎಂದು ಪ್ರಿಯಾಂಕ್‌ ಖರ್ಗೆ ಗಮನ ಸೆಳೆದರು.

ಪ್ರಧಾನಿ ಮೋದಿ ಮೇ 13ರಂದು ಆದಂಪುರ ವಾಯುನೆಲೆಗೆ ಭೇಟಿ ನೀಡಿ, ‘ಆಪರೇಷನ್ ಸಿಂದೂರ್’ನಲ್ಲಿ ಭಾಗವಹಿಸಿದ  ಸೈನಿಕರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಪ್ರಧಾನಿ ಸೈನಿಕರಿಗೆ ಧೈರ್ಯ ತುಂಬಿರುವುದು ಅವರ ಜವಾಬ್ದಾರಿಯ ಜೊತೆಗೆ ಶ್ಲಾಘನೀಯ ಕಾರ್ಯ ಎಂದೂ ಖರ್ಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಪಾರದರ್ಶಕತೆ ತೋರಬೇಕು. ಸರ್ವಪಕ್ಷ ಸಭೆ ಕರೆದು ಯಾರು ಯಾರ ಮುಂದೆ ಮಂಡಿಯೂರಿದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

Related Posts

Leave a Reply

Your email address will not be published. Required fields are marked *