ಆನೇಕಲ್ನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಚಾಮಾನಹಳ್ಳಿಯಲ್ಲಿ ವಿವಾಹೇತರ ಸಂಬಂಧ ಹೊಂದಿರುವ ಶಂಕೆಯಿಂದ ಹಿಟ್ಟಿನ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ.
ಅನಿತಾ(27) ಕೊಲೆಯಾದ ಮಹಿಳೆ. ರಾಚಮಾನಹಳ್ಳಿಯ ವಾಸಿ ಬಾಬು(32) ಕೊಲೆ ಆರೋಪಿ. ಆರೋಪಿಗೆ ಇಬ್ಬರು ಪತ್ನಿಯರು, ನಾಲ್ಕು ಜನ ಮಕ್ಕಳಿದ್ದಾರೆ.
ಕೊಲೆಯಾದ ಅನಿತಾ ಮೂಲತಃ ಮೈಸೂರಿನ ಚಿಕ್ಕ ಮಾರ್ಕೆಟ್ ನಿವಾಸಿ. ಆರೋಪಿ ಬಾಬು 7 ವರ್ಷಗಳ ಹಿಂದೆ ಇಬ್ಬರನ್ನೂ ಪ್ರೀತಿಸಿ ಒಂದೇ ದಿನ ಒಟ್ಟಿಗೆ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಅನಿತಾಳ ಶೀಲದ ಬಗ್ಗೆ ಶಂಕಿಸುತ್ತಿದ್ದ, ಯಾವಾಗಲೂ ಜಗಳ ಮಾಡುತ್ತಿದ್ದ.
ಬೇಸತ್ತ ಅನಿತಾ ಒಂದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು. ಕಳೆದ ವಾರ ಬಾಬು ಕುಟುಂಬಸ್ಥರು ಅನಿತಾಳ ಮನವೊಲಿಸಿ ವಾಪಾಸ್ ಕರೆದುಕೊಂಡು ಬಂದಿದ್ದರು. ಎಂದಿನಂತೆ ಜಗಳವಾದಾಗ ಆರೋಪಿಯು ಹೆಂಡತಿಗೆ ಮನೆಯಲ್ಲಿದ್ದ ಹಿಟ್ಟಿನ ದೊಣ್ಣೆ ಮತ್ತು ಕೈನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದ ಅನಿತಾ ಮೃತಪಟ್ಟಿರುವ ಮಾಹಿತಿ ತಿಳಿದ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಬಾಬುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.