ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಮಾಫಿ ಸಾಕ್ಷಿಯಾಗಲು ಅವಕಾಶ ಕೋರಿರುವ ಆರೋಪಿ ಪ್ರದೋಶ್ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ 14ನೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆರೋಪಿ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್, 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದಿದೆ.
ಸೆಷನ್ಸ್ ಕೋರ್ಟ್, ಮಾಫಿ ಸಾಕ್ಷಿ ಅರ್ಜಿ ವಿಚಾರಣೆಯಲ್ಲಿ ಇತರಆರೋಪಿಗಳ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ಆದೇಶಿಸಿತ್ತು. ಆದೇಶ ಪ್ರಶ್ನಿಸಿ ದರ್ಶನ್ ಪರವಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ, ದರ್ಶನ್ ಆಕ್ಷೇಪಣೆ ಸಲ್ಲಿಸುವಂತಿಲ್ಲ ಎಂದು ಹೇಳಿದೆ.
ದರ್ಶನ್ ಪರ ವಕೀಲ ಹಷ್ಮತ್ ಪಾಷಾ , ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಮುನ್ನ ಆರೋಪಿಗಳ ವಾದ ಆಲಿಸಬೇಕು ಎಂದರು. ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಪ್ರಸನ್ನ ಕುಮಾರ್ , ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ವೇಳೆ ಇತರ ಆರೋಪಿಗಳಿಗೆ ಆಕ್ಷೇಪಣೆ ಸಲ್ಲಿಸುವ ಅವಕಾಶವಿಲ್ಲ. ಪ್ರಕ್ರಿಯೆಯಲ್ಲಿ ಲೋಪವಾದಲ್ಲಿ ಮಾತ್ರ ಆರೋಪಿಗಳು ಪ್ರಶ್ನಿಸಬಹುದು ಎಂದು ವಾದಿಸಿದರು.
ವಾದ ಆಲಿಸಿದ ನ್ಯಾ. ನಾಗಪ್ರಸನ್ನ, ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಹಂತದಲ್ಲಿ ಆರೋಪಿಗಳು ಪ್ರಶ್ನೆ ಮಾಡುವಂತಿಲ್ಲ. ದರ್ಶನ್ ಪರ ವಕೀಲರ ವಾದ ಒಪ್ಪಲು ಸಾಧ್ಯವಿಲ್ಲ ಎಂಎಂದು ತಿಳಿಸಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕೋರ್ಟ್ಗೆ ಖುದ್ದು ಹಾಜರಾಗುವ ವಿಚಾರವೂ ವಿಚಾರಣೆಗೆ ಬಂದಿದ್ದು, ಸೋಮವಾರ ಆದೇಶ ನೀಡುವುದಾಗಿ ಕೋರ್ಟ್ ತಿಳಿಸಿದೆ.
ವಿಚಾರಣೆ ವೇಳೆ ಆರೋಪಿ ಪವಿತ್ರಾಗೌಡ ತಡವಾಗಿ ಹಾಜರಾಗಿದ್ದು, ಪವಿತ್ರಾಗೌಡ ತಡವಾಗಿ ಹಾಜರಾಗಿದ್ದೇಕೆ, ಹೆಡ್ಫೋನ್ ಯಾಕೆ ಬಳಸುತ್ತಿದ್ದಾರೆ, ಯಾರು ಪರ್ಮಿಷನ್ ಕೊಟ್ಟರು, ವುಮೆನ್ಸ್ ಸೆಲ್ನಲ್ಲಿ ಹೆಡ್ಫೋನ್ಗಳನ್ನು ಕೊಡುತ್ತಾರಾ ಎಂದು ನ್ಯಾಯಾಧೀಶೆ ಸುಜಾತಾ ಎಂ. ಮಡಿವಾಳಪ್ಪ ಅಧಿಕಾರಿಗಳನ್ನು ಪ್ರಶ್ನಿಸಿದರು.
ಪವಿತ್ರಾಗೌಡ ಅವರು ತಾವು ಹೆಡ್ಫೋನ್ ಬಳಸಿಲ್ಲ ಎಂದು ಉತ್ತರಿಸಿದರು. ನಾನು ನೋಡಿದ್ದೇನೆ ಎಂದು ನ್ಯಾಯಾಧೀಶೆ ತಿಳಿಸಿದರು. ತು ಜೈಲಾಧಿಕಾರಿಗಳಿಂದ ಸ್ಪಷ್ಟೀಕರಣ ಪಡೆಯುವಂತೆ ಸೂಚಿಸಿದರು.


