ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದ ಮನೆಯೊಂದರಲ್ಲಿ ಕೆಲಸಕ್ಕಿದ್ದ ನೇಪಾಳಿಗಳು ಚಿನ್ನ, ಬೆಳ್ಳಿ, ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಹೊಸಕೋಟೆ ಹೊರವಲಯದ ಹೆದ್ದಾರಿ ಬದಿಯ 40 ಎಕರೆ ಪ್ರದೇಶದಲ್ಲಿರುವ ಪಾಲಮ್ ವಿಲ್ಲಾ ಬಡಾವಣೆಯಲ್ಲಿ ವಾಸವಿರುವ ರವಿ ರಾಜನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.
ಎರಡು ತಿಂಗಳ ಹಿಂದೆ ಬಡಾವಣೆಗೆ ನೇಪಾಳಿ ಕುಟುಂಬ ಬಂದಿತ್ತು. ಸೆಕ್ಯೂರಿಟಿ ಗಾರ್ಡ್ ಒಬ್ಬ ಪತ್ನಿಗೆ ಮನೆಯಲ್ಲಿ ಕೆಲಸವಿದ್ದರೆ ಕೊಡಿ. ನಿತ್ಯ ಕಾರು ತೊಳೆದು ಮನೆ ಕ್ಲೀನ್ ಮಾಡುತ್ತಾರೆ ಎಂದು ಕೇಳಿಕೊಂಡಿದ್ದ. ಅದರಂತೆ ರವಿ ರಾಜನ್ ಆಕೆಗೆ ಕೆಲಸ ನೀಡಿದ್ದರು.
ಕೆಲವು ದಿನಗಳ ಹಿಂದೆ ಊರಿಗೆ ಹೋಗಿ ಬರುತ್ತಿದ್ದು, ಮನೆಯನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು. ಇದೇ ಸಮಯಕ್ಕೆ ಕಾಯುತ್ತಿದ್ದರು ಎಂಬಂತೆ ಆರೋಪಿಗಳು ಮಧ್ಯರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ, ಬೆಳ್ಳಿ, ನಗದು ದೋಚಿ ಪಾರಿಯಾಗಿದ್ದಾರೆ. ಸಂಪೂರ್ಣ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಊರಿಂದ ಮಾಲೀಕರು ವಾಪಸ್ ಬಂದಾಗ, ಬಡಾವಣೆಯ ಪಕ್ಕದ ಮನೆಯವರು ಸೆಕ್ಯೂರಿಟಿ ಗಾರ್ಡ್ ನಾಪತ್ತೆಯಾಗಿದ್ದು, ಮನೆಯಲ್ಲಿ ಚೆಕ್ ಮಾಡಿಕೊಳ್ಳಿ ಎಂದಿದ್ದಾರೆ. ಮನೆ ಒಳಗೆ ನೋಡಿದಾಗ ಬಾಗಿಲು ಒಡೆದು ಕಳ್ಳರು ದೋಚಿಕೊಂಡು ಹೋಗಿರುವುದ ಗೊತ್ತಾಗಿದೆ. ಇಬ್ಬರು ವ್ಯಕ್ತಿಗಳು ಮನೆ ಒಳಗಡೆ ರಾಡ್ ಹಿಡಿದು ನುಗ್ಗಿ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.


