Menu

ತುರ್ತು ಸೇವೆಗೆ 450 ಹೊಸ ಅಂಬುಲೆನ್ಸ್, 3,500 ಹುದ್ದೆಗಳ ಭರ್ತಿಗೂ ಅನುಮತಿ: ಸಚಿವ ಖಾದರ್

ರಾಜ್ಯದ 60 ರಿಂದ 70 ವರ್ಷದ ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದಿಂದ ‘ಸಂಧ್ಯಾ ಕಿರಣ’ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಚಿವ ಯು.ಟಿ. ಖಾದರ್  ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ತುರ್ತು ವೈದ್ಯಕೀಯ ಸೇವೆ ಬಲಪಡಿಸುವ ನಿಟ್ಟಿನಲ್ಲಿ ಹೊಸ ಅಂಬುಲೆನ್ಸ್‌ಗಳ ಸೇರ್ಪಡೆಗೂ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 450 ಹೊಸ ಅಂಬುಲೆನ್ಸ್‌ಗಳನ್ನು ಒದಗಿಸಲಾಗಿದ್ದು, ಶೀಘ್ರದಲ್ಲೇ ಹೊಸ ವಾಹನಗಳು ಸೇವೆಗೆ ಬರಲಿವೆ. ಇದರಿಂದ ರಾಜ್ಯದಲ್ಲಿ 750ಕ್ಕೂ ಹೆಚ್ಚು ಅಂಬುಲೆನ್ಸ್‌ಗಳು ಕಾರ್ಯನಿರ್ವಹಿಸಲಿವೆ ಎಂದರು.

ತಾಲ್ಲೂಕು ಆಸ್ಪತ್ರೆಗಳಿಂದ ಜಿಲ್ಲಾ ಆಸ್ಪತ್ರೆಗಳವರೆಗೆ ರೋಗಿಗಳನ್ನು ತ್ವರಿತವಾಗಿ ಸಾಗಿಸಲು ವ್ಯವಸ್ಥೆ ಬಲಪಡಿಸಲಾಗುತ್ತಿದೆ. ದೂರದ ಪ್ರದೇಶಗಳಲ್ಲಿ ತುರ್ತು ಸೇವೆ ಒದಗಿಸಲು 100 ಬೈಕ್ ಅಂಬುಲೆನ್ಸ್‌ ನಿಯೋಜಿಸಲಾಗಿದ್ದು, ಸೇವೆಯಲ್ಲಿ ವಿಳಂಬ ಮಾಡುವ ಅಂಬುಲೆನ್ಸ್ ನಿರ್ವಾಹಕರ ವಿರುದ್ಧ ದಂಡ ವಿಧಿಸುವ ಕಾನೂನು ರೂಪಿಸಲಾಗಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಮಾನವ ಸಂಪನ್ಮೂಲ ಕೊರತೆ ನೀಗಿಸುವ ಕಾರ್ಯವೂ ನಡೆಯುತ್ತಿದೆ. ಈಗಾಗಲೇ 200 ಎಂಬಿಬಿಎಸ್ ವೈದ್ಯರು ಸೇವೆಗೆ ಸೇರಿದ್ದು, ನರ್ಸ್ ಹಾಗೂ ಫಾರ್ಮಾಸಿಸ್ಟ್‌ಗಳ ನೇಮಕವೂ ಪೂರ್ಣಗೊಂಡಿದೆ. 1,000 ಸಿಬ್ಬಂದಿ ನೇಮಕಕ್ಕೆ ಅನುಮೋದನೆ ದೊರೆತಿದ್ದು, ಸುಮಾರು ಒಂದೂವರೆ ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮತ್ತಷ್ಟು 3,500 ಹುದ್ದೆಗಳ ಭರ್ತಿಗೂ ಅನುಮತಿ ದೊರೆತಿದ್ದು, ನೇಮಕಾತಿ ವಿಧಾನ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಆಯುಷ್ಮಾನ್ ಕರ್ನಾಟಕ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ, ಸದ್ಯ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಸೀಮಿತವಾಗಿರುವ ಚಿಕಿತ್ಸಾ ಸೌಲಭ್ಯವನ್ನು ಎಪಿಎಲ್ ಕುಟುಂಬಗಳಿಗೂ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

‘ಸಂಧ್ಯಾ ಕಿರಣ’ ಯೋಜನೆಯಡಿ ನಿವೃತ್ತ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಭದ್ರತೆ ಒದಗಿಸಲಾಗುವುದು. ಪಿಂಚಣಿಯಿಂದ ಶೇ.1.3ರಷ್ಟು ಮೊತ್ತವನ್ನು ಯೋಜನೆಗೆ ನೀಡುವ ಪ್ರಸ್ತಾವವಿದ್ದು, ಕುಟುಂಬ ಪಿಂಚಣಿ ಪಡೆಯುವ ಸಂದರ್ಭ ಶೇ.0.75ರಷ್ಟು ಕೊಡುಗೆ ಇರಲಿದೆ. ಕೇಂದ್ರ ಸರ್ಕಾರದ ವಯೋ ವಂದನ ಯೋಜನೆಯಲ್ಲಿ ಇರುವ ಗೊಂದಲಗಳ ಬಗ್ಗೆ ಚರ್ಚಿಸಿ, ಆರೋಗ್ಯ ಸೌಲಭ್ಯಗಳನ್ನು ಮತ್ತಷ್ಟು ವ್ಯಾಪಕಗೊಳಿಸಲಾಗುವುದು ಎಂದರು.

Related Posts

Leave a Reply

Your email address will not be published. Required fields are marked *