ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಾಹಿತ ಯುವತಿ 21 ವರ್ಷದ ಪ್ರೇರಣಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕಿರುಕುಳ ಹಾಗೂ ಅತಿಯಾದ ಅನುಮಾನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗಷ್ಟೇ ಬಿಎಸ್ಸಿ ಮುಗಿಸಿದ್ದ ಪ್ರೇರಣಾ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇರಣಾ ಮತ್ತು ವಿನಯ್ ಕುಮಾರ್ ಮದುವೆ ಒಂದುವರೆ ವರ್ಷದ ಹಿಂದೆ ನಡೆದಿತ್ತು. ಮದುವೆಯ ನಂತರ ನಾವೇ ಓದಿಸುತ್ತೇವೆ ಎಂದು ಹೇಳಿದ್ದಂತೆ ಗಂಡನ ಮನೆಯವರು ಓದಿಸಿದ್ದು, ಈ ವರ್ಷ ಪ್ರೇರಣಾ ಬಿಎಸ್ಸಿ ಮುಗಿಸಿದ್ದರು.
ಪತಿ ವಿನಯ್ ಕುಮಾರ್ ಇಸ್ರೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಅತಿದ ಅನುಮಾನದ ವ್ಯಕ್ತಿಯಾಗಿದ್ದ. ಪ್ರೇರಣಾ ಮೇಲೆ ಅನುಮಾನ ಪಡುತ್ತಿದ್ದ ಪ್ರತಿದಿನ ಕಿರುಕುಳ ನೀಡುತ್ತಿದ್ದ. ಮಗು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕಿರುಕುಳ ತಾಳಲಾರದೆ ಎರಡು ತಿಂಗಳ ಹಿಂದೆ ಪ್ರೇರಣಾ ತಂದೆ ಮನೆಗೆ ಬಂದಿದ್ದರು. ಕುಟುಂಬಸ್ಥರೆಲ್ಲಾ ಸೇರಿ ಪಂಚಾಯಿತಿ ಮಾಡಿ, ಬುದ್ಧಿ ಹೇಳಿ 15 ದಿನಗಳ ಹಿಂದೆ
ವಿನಯ್ ಮನೆಗೆ ಕಳುಹಿಸಿಕೊಟ್ಟಿದ್ದರು. ಗಂಡನ ಮನೆಯವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ ಎಂದು ಆಕೆಯ ಮನೆಯವರು ದೂರಿದ್ದಾರೆ.
ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಗಂಡನ ಮನೆಯವರ ಕಿರುಕುಳಕ್ಕೆ ಬಲಿಯಾಗಿದ್ದಾಳೆ ಎಂದು ಪ್ರೇರಣಾ ಪೋಷಕರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.


