ಕೋಲಾರದ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗೇಟ್ ಬಳಿ ಕ್ಯಾಂಟರ್ ವಾಹನ ಹಾಗೂ ಬೈಕ್ ಡಿಕ್ಕಿಯಾಗಿ ದೇವಾಲಯಕ್ಕೆ ತೆರಳುತ್ತಿದ್ದ ಸ್ನೇಹಿತರಿಬ್ಬರು ಸ್ಥಳದಲ್ಲೇ ಅಸು ನೀಗಿದ್ದಾರೆ.
ಚಿಂತಾಮಣಿ ತಿಮ್ಮಸಂದ್ರದ ಶಶಿ (25), ಬೆಂಗಳೂರು ನೆಲಮಂಗಲದ ತನುಷ್ (25) ಮೃತಪಟ್ಟವರು. ಕಾಣಿಪಾಕಂ ದೇವಾಲಯಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸ್ನೇಹಿತನ ಕೊಲೆಗೈದಾತ ಮೂರು ತಿಂಗಳ ಬಳಿಕ ಅರೆಸ್ಟ್
ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಬಳಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅದು ಅಪಘಾತವಲ್ಲ, ಸ್ನೇಹಿತನೇ ಕೊಲೆ ಮಾಡಿ ಕಟ್ಟಿರುವ ಕಥೆ ಎಂಬುದನ್ನು ಬಯಲಿಗೆಳೆದಿದ್ದಾರೆ.
ಯಶವಂತ್ (26) ಕೊಲೆಯಾಗಿದ್ದ ಯುವಕ. ಸ್ನೇಹಿತ ಸಚಿನ್ ಕೊಲೆ ಆರೋಪಿ. ಇಬ್ಬರೂ ಹಾಸನದ ವಿಜಯನಗರ ನಿವಾಸಿಗಳು. ಜೂನ್ 12 ರಂದು ರಾತ್ರಿ ಹಿರೇಗೌಜ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸ್ಥಳದಲ್ಲಿ ಆಟೋವೊಂದು ಪಲ್ಟಿಯಾಗಿತ್ತು. ಈ ಅಪಘಾತದಿಂದ ಯುವಕ ಸತ್ತಿರುವುದಾಗಿ ನಂಬಲಾಗಿತ್ತು. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಶವಂತ್ ಬೈಕ್ ನಾಪತ್ತೆ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕೊಲೆಗೈದು ಏನೂ ಗೊತ್ತಿಲ್ಲದವನಂತೆ ಆರೋಪಿ ಸಚಿನ್ ನಟಿಸಿದ್ದ. ಒಂದೂವರೆ ತಿಂಗಳ ತನಿಖೆ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಳೆಯ ದ್ವೇಷ, ಹಣಕಾಸು ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.


