ವಿಧಾನಸೌಧದಲ್ಲಿ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಕೆಲವು ಸ್ಪಷ್ಟ ನಿರ್ದೇಶನ ಹಾಗೂ ಸೂಚನೆಗಳನ್ನು ನೀಡಿದ್ದಾರೆ. ಬಡವರಿಗೆ ತಲೆ ಮೇಲೊಂದು ಸೂರು ಬೇಕು. ಅವರಿಗೆ ನಿವೇಶನದ ಬದಲು ಮನೆ ಕಟ್ಟಿ ಕೊಡಲು ಆದ್ಯತೆ ನೀಡಿ. ನಿವೇಶನಗಳು ಖಾಲಿ ಬಿದ್ದಷ್ಟೂ ಸ್ಲಂಗಳು ತಲೆ ಎತ್ತುತ್ತವೆ. ಇದಕ್ಕೆ ಅವಕಾಶ ಕೊಡಬೇಡಿ ಎಂದು ಹೇಳಿದ್ದಾರೆ.
ಯಾವುದೇ ವಸತಿ ಯೋಜನೆಗೆ ಕೈ ಹಾಕುವ ಮೊದಲೇ ಸ್ಪಷ್ಟ ಯೋಜನೆ ಇಟ್ಟುಕೊಳ್ಳಿ. ಮನೆ ನಿರ್ಮಿಸಿದ ನಂತರ ಮಾರಾಟಕ್ಕೆ ಒದ್ದಾಡುವುದು ಬೇಡ. ನೀವು ಗುಣಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಇರಬೇಕು. ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಬಡವ ಮನೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸಿ ಎಂದು ಸಲಹೆ ನೀಡಿದ್ದಾರೆ.
ಹರಾಜು ಹಾಕಿದರೆ ಅರ್ಹರಿಗೆ ಸಿಗುತ್ತದೋ, ಹಣವಿದ್ದವರಿಗೆ ಸಿಗುತ್ತದೋ ಎಂಬ ಪ್ರಶ್ನೆ ಮುಂದಿಟ್ಟು ಸಿಎಂ, ಅಧಿಕಾರಿಗಳು ತಬ್ಬಿಬ್ಬುಗೊಳ್ಳುವಂತೆ ಮಾಡಿದರು. ಹರಾಜು ವ್ಯವಸ್ಥೆ ನಿಲ್ಲಿಸಿ ಸಾರ್ವಜನಿಕವಾಗಿ ಲಾಟರಿ ಎತ್ತಿ ಮನೆ ಪಡೆಯಲು ಅರ್ಹರಿರುವ ಫಲಾನುಭವಿಗಳನ್ನು ಆರಿಸಿ. ಮುಂಬೈ ಮಾದರಿಯಲ್ಲಿ ಸ್ಲಂಗಳ ಮರು ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ. ಮುಂಬೈಗಿಂತ ಹೆಚ್ಚು ವಿಸ್ತೀರ್ಣದ ಮನೆಗಳನ್ನು ನಿರ್ಮಿಸಿ. ಮುಂಬೈಗೆ ಹೋಗಿ ಅಧ್ಯಯನ ನಡೆಸಿಕೊಂಡು ಬನ್ನಿ. ಅದಕ್ಕಿಂತ ಉತ್ತಮ ಮಾದರಿಯಲ್ಲಿ ನಾವೇನು ಮಾಡಬಹುದು ಎಂಬ ಬಗ್ಗೆ ಮುಂದಿನ ಕ್ಯಾಬಿನೆಟ್ ಒಳಗೆ ವರದಿ ಸಿದ್ದಪಡಿಸಿ ಎಂದು ನಿರ್ದೇಶನ ನೀಡಿದರು.
ಗ್ರಾಮೀಣ ವಸತಿ ಮನೆಗಳ ನಿರ್ಮಾಣ, ನಿವೇಶನಗಳ ಹಂಚಿಕೆಯಲ್ಲಿ ನಿಧಾನಗತಿಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಮನೆ ಕಟ್ಟಲು ಸರ್ಕಾರದಿಂದ ಕಡಿಮೆ ದರದಲ್ಲಿ ನಿವೇಶನ ಪಡೆದವರು 3 ಅಥವಾ ಐದು ವರ್ಷದೊಳಗೆ ಮನೆ ನಿರ್ಮಿಸುವ ನಿಯಮ ಪರಿಶೀಲಿಸಿ ಎಂದು ಸೂಚಿಸಿದರು. ಕೆಹೆಚ್ಬಿಯಿಂದ 568 ಯೋಜನೆಗಳನ್ನು ಅನುಮೋದಿಸಲಾಗಿದ್ದು, ಇದರಲ್ಲಿ 280 ಅನುಷ್ಠಾನಗೊಂಡಿವೆ. 288 ಬಾಕಿ ಇವೆ. ಈ ಬಾಕಿ ಯೋಜನೆಗಳಿಗೆ ಅಡ್ಡಿ ಆಗಿರುವ ತಾಂತ್ರಿಕ ಅಡಚಣೆಗಳ ನಿವಾರಣೆಗೆ ಕ್ರಮ ವಹಿಸಬೇಕು ಮತ್ತು ದುರುಪಯೋಗ ಆಗದಂತೆ ಜಾಗ್ರತೆ ವಹಿಸಬೇಕು ಎಂದರು.
ಯಾವುದೇ ಪ್ರಮುಖ ತೀರ್ಮಾನಗಳ ಬಗ್ಗೆ ನನ್ನ ಜತೆ ಚರ್ಚೆ ಅಗತ್ಯ. ಸಂಡೂರಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಿರುವ ಮನೆಗಳ ಗುಣಮಟ್ಟಕ್ಕೆ ಮೆಚ್ಚುಗೆ. ಯಾವುದೇ ವಸತಿ ಯೋಜನೆ ಅನುಷ್ಠಾನಕ್ಕೆ ಯೋಜನಾ ವಿಭಾಗಕ್ಕೆ ಮೊದಲು ಹೋಗಲೇಬೇಕು. ಮನೆ ಕಟ್ಟಿದರೆ ಸಾಲದು. ಮೂಲಭೂತ ಸೌಲಭ್ಯಗಳು ಮತ್ತು ಸೂಕ್ತ ಸಂಪರ್ಕ ಕಲ್ಪಿಸುವ ಕಡೆಗೂ ಗಮನ ಹರಿಸಬೇಕು.ನೈಜ ಫಲಾನುಭವಿಗಳಿಗೇ ಸವಲತ್ತು ಸಿಗಬೇಕು. ಈ ಬಗ್ಗೆ ಎಲ್ಲರೂ ಸ್ಪಷ್ಟತೆ ಇಟ್ಟುಕೊಳ್ಳಿ. ಲಾಟರಿ ಮೂಲಕ ಮನೆ ಹಂಚುತ್ತೀರೋ, ಹರಾಜಿನ ಮೂಲಕ ಹಂಚುತ್ತೀರೋ ಎನ್ನುವುದಕ್ಕಿಂತ ನೈಜ ಅರ್ಹರಿಗೇ ಮನೆ ಸಿಗಬೇಕು. ಇದಕ್ಕೇನು ವ್ಯವಸ್ಥೆ ಮಾಡಿದ್ದೀರಿ ಎನ್ನುವ ವಿವರ ಸಲ್ಲಿಸಿ ಎಂದರು.
ಶಿವರಾಮಕಾರಂತ ಬಡಾವಣೆಯ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಗಳ ನಿರ್ಮಾಣ ಜವಾಬ್ದಾರಿಯನ್ನು ಬಿಡಿಎಗೆ ವಹಿಸಲು ಸೂಚಿಸಿದರು. ಹಲವು ವರ್ಷಗಳ ಹಿಂದೆಯೇ ಮನೆಗಾಗಿ ಅರ್ಜಿ ಸಲ್ಲಿಸಿದವರು ಇನ್ನೂ ಕಾಯುತ್ತಿದ್ದಾರೆ. ಅವರೆಲ್ಲ ಠೇವಣಿ ಕಟ್ಟಿದ್ದಾರೆ. ಈ ಅರ್ಜಿಗಳ ಮೇಲೆ ಹಿಂದಿನ ಸರ್ಕಾರಗಳ ವಸತಿ ಸಚಿವರು, ಸೋಮಣ್ಣ ಅವರ ಫೋಟೋ ಇದೆ. ಅವರಿಗಿನ್ನೂ ಮನೆ ಕೊಟ್ಟಿಲ್ಲ. ಪಾಪ ಅವರೆಲ್ಲಾ ಇನ್ನೂ ಎಷ್ಟು ವರ್ಷ ಕಾಯಬೇಕು. ಬೇಗ ಮನೆ ವಿತರಿಸಿ. ಫಲಾನುಭವಿಗಳ ಪಟ್ಟಿ ಬೇಗ ಕೊಡಲು ಶಾಸಕರ ಜತೆ ಮಾತನಾಡುವೆ. ಜೀವಿತಾವಧಿಯಲ್ಲಿ ಒಂದು ಮನೆ ಬೇಕು ಎನ್ನೋದು ಬಡವರು, ಮಧ್ಯಮ ವರ್ಗದವರ ಕನಸು, ಆಸೆ. ಅರ್ಜಿದಾರರು ಇನ್ನೂ ಎಷ್ಟು ವರ್ಷ ಕಾಯಬೇಕ್ರೀ…ಮೊದಲು ಮನೆ ಹಂಚಿಕೆ ಮಾಡಿ ಎಂದರು.


