ಅತಿಯಾಗಿ ಮೊಬೈಲ್ ಬಳಸುತ್ತಿರುವುದಕ್ಕೆ ಪೋಷಕರು ಗದರಿಸಿದರೆಂದು ೧೭ ವರ್ಷದ ಮಗಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ಆಸಿಫಾಬಾದ್ನ ಸಂದೀಪ್ ನಗರದಲ್ಲಿ ನಡೆದಿದೆ.
ಸ್ವರ್ಣಲತಾ ಮತ್ತು ಪೋಚಿರಾಮ್ ದಂಪತಿಯ ಮಗಳು ಸಾತ್ವಿಕಾ ಸ್ನಾನ ಮಾಡದೆ ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ ಕುಳಿತಿದ್ದಳು. ಇದನ್ನು ಗಮನಿಸಿದ ಪೋಷಕರು ಆಕೆಗೆ ಬೈದು ಸ್ನಾನ ಮಾಡುವಂತೆ ಹೇಳಿದ್ದರು. ಇದಕ್ಕೆ ನೊಂದ ಸಾತ್ವಿಕಾ ಮನೆಯಿಂದ ಹೊರಗೆ ಓಡಿ ಹೋಗಿ ಹತ್ತಿರದ ಬಾವಿಗೆ ಹಾರಿದ್ದಾಳೆ. ಬಾವಿಯ ನೀರಿನಲ್ಲಿ ಒದ್ದಾಡುತ್ತಾ ಜೋರಾಗಿ ಕಿರುಚಾಡಿದ್ದಾಳೆ. ಕೂಗು ಕೇಳಿ ಓಡಿಬಂದ ಕಾಲೋನಿ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಸ್ಎಚ್ಓ ಬಾಲಾಜಿ ವರಪ್ರಸಾದ್ ನೇತೃತ್ವದ ಪೊಲೀಸ್ ತಂಡ ಮತ್ತು ಅಗ್ನಿಶಾಮಕ ದಳ ಧಾವಿಸಿ ಬಾಲಕಿಯನ್ನು ಬಾವಿಯಿಂದ ಸುರಕ್ಷಿತವಾಗಿ ಹೊರ ತಂದಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಕೌನ್ಸೆಲಿಂಗ್ ನಡೆಸಲಾಗಿದೆ.
ಪಕ್ಕದ ಮನೆಯವರಿಂದ ಮೊಬೈಲ್ ತೆಗೆದುಕೊಂಡಿದ್ದಕ್ಕೆ ತಾಯಿ ಬೈದರೆಂದು ನೊಂದು ಬಾಲಕಿಯರಿಬ್ಬರು ಮನೆ ತೊರೆದಿರುವ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ಅದೇ ರೀತಿ ಅತಿಯಾಗಿ ಮೊಬೈಲ್ ಬಳಸಬೇಡ ಎಂದ ಕಾರಣಕ್ಕೆ ಮಕ್ಕಳು ಸುಸೈಡ್ ಮಾಡಿಕೊಳ್ಳುವುದು, ಮೊಬೈಲ್ ಕೊಡಿಸಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾಮಾಜಿಕ ವ್ಯವಸ್ಥೆಯಲ್ಲಿ ಆತಂಕ ಸೃಷ್ಟಿಸಿದೆ.


