Menu

ನನಗೆ ಸಿಕ್ಕಂಥ ತಂದೆ ಬೇರೆ ಯಾರಿಗೂ ಸಿಗದಿರಲಿ, ತಂದೆ ನನ್ನ ದೇಹ ಮುಟ್ಟದಿರಲಿ: ಡೆತ್‌ ನೋಟ್‌ ಬರೆದಿಟ್ಟು ಯುವ ವಕೀಲ ಆತ್ಮಹತ್ಯೆ

ತಂದೆಯ ನಿರಂತರ ಮಾನಸಿಕ ಕಿರುಕುಳ ಹಾಗೂ ಅತಿ ಕಟ್ಟುನಿಟ್ಟುಗಳಿಂದ ಬೇಸತ್ತ ಯುವ ವಕೀಲ ಪ್ರಿಯಾಂಶು ಶ್ರೀವಾಸ್ತವ ಕಾನ್ಪುರ ನ್ಯಾಯಾಲಯ ಸಂಕೀರ್ಣದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

“ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತುಹೋಗಿದ್ದೇನೆ. ನಿಮಗೆ ಅಭಿನಂದನೆಗಳು…” ಎಂದು ಯುವ ವಕೀಲ ಬರೆದಿಟ್ಟಿರುವ ಡೆತ್ ನೋಟ್ ಹಾಗೂ ವಾಟ್ಸಾಪ್ ಸ್ಟೇಟಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನನ್ನ ತಂದೆ ನನ್ನ ದೇಹವನ್ನು ಮುಟ್ಟಲು ಬಿಡಬೇಡಿ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಬೇಡ, ಇದರಿಂದ ನನ್ನ ಕುಟುಂಬ ಕಷ್ಟ ಎದುರಿಸುವುದನ್ನು ನಾನು ಬಯಸುವುದಿಲ್ಲ. ಇಂತಹ ತಂದೆ ಯಾರಿಗೂ ಸಿಗದಿರಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಬರೆದಿದ್ದಾರೆ.

ಪ್ರಿಯಾಂಶು ಶ್ರೀವಾಸ್ತವ ಐದನೇ ಮಹಡಿಯಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮಾತು ಮುಗಿಯುತ್ತಿದ್ದಂತೆಯೇ ಕೆಳಕ್ಕೆ ಜಿಗಿದಿದ್ದಾರೆ. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.

ನಾನು ಯಾರನ್ನೂ ಕೇಳದೆ ಒಂದುಸಲ ರೆಫ್ರಿಜರೇಟರ್‌ನಿಂದ ಮಾವಿನ ಜ್ಯೂಸ್ ತೆಗೆದುಕೊಂಡೆ. ಆಗ ನನಗೆ ಆರು ವರ್ಷ. ಇದಕ್ಕಾಗಿ ನನ್ನನ್ನು ಬಟ್ಟೆ ಬಿಚ್ಚಿಸಿ ಮನೆಯಿಂದ ಹೊರಗೆ ಕಳುಹಿಸಲಾಯಿತು. ಪೋಷಕರು ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರಬೇಕು, ಅದು ಉಸಿರುಗಟ್ಟಿಸುವ ಹಂತಕ್ಕೆ ಹೋಗಬಾರದು ಎಂದು ಬರೆದಿದ್ದಾರೆ.”ನಾನು ನನ್ನ ಜೀವನದಲ್ಲಿ ಅದೆಲ್ಲವನ್ನು ಮರೆತು ಮುಂದುವರಿಯಲು ಖುಷಿಯಾಗಿ ಬದುಕಲು ಬಹಳಷ್ಟು ಪ್ರಯತ್ನಿಸಿದೆ, ಆದರೆ ಅದು ಆಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಣ್ಣ ವಿಷಯಗಳಿಗೆ ಅವರನ್ನು ಆಗಾಗ ಪ್ರಶ್ನೆ ಮಾಡಲಾಗುತ್ತಿತ್ತು. ಯಾವಾಗಲೂ ಒತ್ತಡ ಹೇರಲಾಗುತ್ತಿತ್ತು. ಈ ಒತ್ತಡದೊಂದಿಗೆ ನಾನು ಇನ್ನು ಮುಂದೆ ಬದುಕಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾನು ಫಿಸಿಕಲ್ ಶಿಕ್ಷಣ ಪಡೆಯೋಕೆ ಬಯಸಿದ್ದರೂ ತಂದೆ ಕಂಪ್ಯೂಟರ್ ಸೈನ್ಸ್ ಕಲಿಯಲು ಒತ್ತಾಯಿಸುತ್ತಿದ್ದರು. ತಂದೆ ಸಾರ್ವಜನಿಕವಾಗಿ ತನ್ನನ್ನು ಅವಮಾನಿಸುತ್ತಿದ್ದರು. ನನ್ನ ಜೀವನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ನಾನು ಎಲ್ಲಿಗೆ ಹೋಗುತ್ತಿದ್ದೇನೆ, ನಾನು ಯಾವಾಗ ವಾಪಸ್ ಬರುತ್ತೇನೆ, ಫೋನ್‌ನಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಅವರು ಯಾವಾಗಲೂ ನನ್ನನ್ನು ಕೇಳುತ್ತಾರೆ. ನನ್ನ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ಉಸಿರುಗಟ್ಟಿಸುತ್ತಿದೆ. ಪ್ರತಿದಿನ ಉಸಿರುಗಟ್ಟಿಸುವುದಕ್ಕಿಂತ ಒಮ್ಮೆಲೇ ಶಾಶ್ವತವಾಗಿ ಸಾಯುವುದು ಉತ್ತಮ ಎಂದು ಬರೆದಿದ್ದಾರೆ.

Related Posts

Leave a Reply

Your email address will not be published. Required fields are marked *