ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಎರಡು ಎಕರೆ ಜಮೀನಿಗೆ ದಾರಿಗಾಗಿ ಶುರುವಾದ ಜಗಳ ತೀವ್ರಗೊಂಡು ಒಬ್ಬನ ಕೊಲೆಯಾಗಿದೆ. ಈ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಿದವರ ಮನೆಗೆ ಕೊಲೆಯಾದವನ ಸೋದರ ಬೆಂಕಿ ಹಚ್ಚಿ ಜೈಲು ಸೇರಿದ್ದಾನೆ.
ಮಲ್ಲಪ್ಪ ಮತ್ತು ಅವರ ಅಣ್ಣ ಹನುಮಂತರಾಯನ ಕುಟುಂಬಗಳ ಮಧ್ಯೆ ನಾಲ್ಕು ವರ್ಷಗಳಿಂದ ಎರಡು ಎಕರೆ ಜಮೀನಿನ ದಾರಿ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹನುಮಂತರಾಯನ ಕುಟುಂಬ ಮತ್ತು ಸಂಬಂಧಿಕರು 27 ವರ್ಷದ ಪರಮೇಶ್ವರ ಎಂಬಾತನನ್ನು ತಲ್ವಾರ್ ಮತ್ತು ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಈ ವೇಳೆ ಅಣ್ಣನನ್ನು ಕಾಪಾಡಲು ಹೋದ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿದ್ದವು. ಕೆಂಭಾವಿ ಪೊಲೀಸರು ಪ್ರಮುಖ ಆರೋಪಿಗಳಾದ ಪರಮಣ್ಣ, ದೇವಿಂದ್ರಪ್ಪ, ಚನ್ನಪ್ಪ ಮತ್ತು ಮಹಾದೇವಪ್ಪ ಸೇರಿ ನಾಲ್ವರನ್ನು ಬಂಧಿಸಿದ್ದರು.
ಅಣ್ಣನ ಸಾವಿನಿಂದ ಆಕ್ರೋಶಗೊಂಡಿದ್ದ ಸಹೋದರ ರೇವಣಸಿದ್ದ, ಆರೋಪಿಗಳ ಕುಟುಂಬ ಊರು ಬಿಟ್ಟಿದ್ದ ಸಮಯದಲ್ಲಿ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮನೆಯಲ್ಲಿದ್ದ ಧಾನ್ಯಗಳು, ಬಟ್ಟೆ ಬರೆ ಸೇರಿ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರೇವಣಸಿದ್ದನನ್ನು ಪೊಲೀಸರು ಬಂಧಿಸಿದ್ದಾರೆ.


