ದಾವಣಗೆರೆಯ ಉದ್ಯಮಿ ಭರತ್ ಜೈನ್ (52), ಪತ್ನಿ ಆರತಿ ಜೈನ್ (50) ಮಾರ್ಚ್ ನಾಲ್ಕರಂದು ಲೌಕಿಕ ಸುಖಭೋಗ, ಸಂಸಾರ ತೊರೆದು ವಿರಾಗಿಗಳಾಗಿ ಜೈನ ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ.
ದಾವಣಗೆರೆಯಲ್ಲಿ ಮಾರ್ಚ್ 4ರಂದು ಐತಿಹಾಸಿಕ ಜೈನ್ ದೀಕ್ಷಾ ಮಹೋತ್ಸವ ನಡೆಯಲಿದೆ. ಪ್ರಸಿದ್ಧ ಉದ್ಯಮಿ ದಂಪತಿ ಸೇರಿ ಎಂಬಿಎ ಮತ್ತು ಬಿಕಾಂ ಪದವೀಧರರಾದ ಇಬ್ಬರು ಯುವತಿಯರು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ಜೈನ ಗುರು ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಸಮ್ಮುಖ ನಗರದ ಹೊಳೆಹೊನ್ನೂರು ತೋಟದಲ್ಲಿ ದೀಕ್ಷಾ ಮಹೋತ್ಸವ ಜರುಗಲಿದೆ. ಲಲಿತ್ ಗಾರ್ಮೆಂಟ್ಸ್ ಮಾಲೀಕರಾಗಿರುವ ಈ ಜೈನ್ ಕುಟುಂಬದ ಜೊತೆ ಕಮಲೇಶ್ ಜೈನ್ ಮತ್ತು ಬಬಿತಾ ಜೈನ್ ಅವರ ಮಗಳು ಕ್ರುನಾಲಿ ಜೈನ್ (30) ಎಂಬಾಕೆಯೂ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಕ್ರುನಾಲಿ ಜೈನ್ ಪುಣೆಯ ಸಿಂಬಯೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಸನ್ಯಾಸ ದೀಕ್ಷೆ ಪಡೆಯಲಿರುವ ದಾವಣಗೆರೆ ದೀಕ್ಷಿತಾ ಜೈನ್ ಬಿಕಾಂ ಪದವೀಧರೆ. ಅರುಣ್ ಕುಮಾರ್ ಜೈನ್ ಹಾಗೂ ಅನ್ನಪೂರ್ಣ ಬಾಯಿಯ ಮಗಳು. ಭರತ್ ಜೈನ್ ಹಾಗೂ ಆರತಿ ದಂಪತಿಯ ಮಕ್ಕಳಾದ ಮಗ್ನಶೇಖರ್ ವಿಜಯ್ (28) ಹಾಗೂ ಪೂರ್ಣಶೇಖರ್ ವಿಜಯ್ (25) ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.
ಸನ್ಯಾಸ ದೀಕ್ಷೆಗೆ ಮೊದಲು ಸೋಮವಾರ ರಾತ್ರಿ ಅರುಣಾ ಟಾಕೀಸ್ ಮುಂಭಾಗದ ಹೊಳೆಹೊನ್ನೂರು ತೋಟದಲ್ಲಿ ನಾಲ್ವರಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕುಟುಂಬ ಜೀವನದ ಅಂತಿಮ ದಿನವನ್ನು ಆಚರಿಸಿಕೊಂಡರು. ಇಂದು ನಗರದಲ್ಲಿ ಭವ್ಯ ಮೆರವಣಿಗೆ ಮುಗಿದ ಬಳಿಕ ನಾಳೆ ದೀಕ್ಷಾ ಸ್ವೀಕಾರ ಸಮಾರಂಭ ಜರುಗಲಿದೆ.


