ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ಯುವತಿಯರಿಬ್ಬರು ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾಗ ಹಂಪ್ಸ್ನಲ್ಲಿ ಹಾರಿ ಬಿದ್ದು ಒಬ್ಬಾಕೆ ಮೃತಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಬುಲೆಟ್ ಬೈಕ್ ಚಲಾಯಿಸುವಾಗ ಹಂಪ್ಸ್ ಕಾಣದೆ ಯುವತಿಯವರು ರಸ್ತೆಗೆ ಹಾರಿ ಬಿದ್ದಿದ್ದಾರೆ. ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ. ಯುವತಿ ಸ್ವಾತಿ (24) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಕೊನೆಯ ವರ್ಷದಲ್ಲಿ ಓದುತ್ತಿದ್ದರು. ಸ್ವಾತಿಗೆ ಕಳೆದ ನವೆಂಬರ್ನಲ್ಲಿ ಮದುವೆಯಾಗಿತ್ತು. ಇವರಿಬ್ಬರೂ ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ನಲ್ಲಿ ಜಾಲಿ ರೈಡ್ಗೆ ಹೊರಟಿದ್ದರು. ಪ್ರಿಯಾ ಬೈಕ್ ಚಲಾಯಿಸುತ್ತಿದ್ದು, ಸ್ವಾತಿ ಹಿಂಬದಿ ಸೀಟ್ನಲ್ಲಿ ಕುಳಿತಿದ್ದರು. ಈ ವೇಳೆ ಹಂಪ್ಸ್ ಕಾಣದೆ ಇಬ್ಬರೂ ರಸ್ತೆಗೆ ಹಾರಿ ಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲು ಹಳಿಗೆ ತಲೆಕೊಟ್ಟು ದಂಪತಿ ಸುಸೈಡ್
ಮಕ್ಕಳಿಂದ ದೂರವಾಗಿ ತುತ್ತು ಊಟಕ್ಕೂ ಪರದಾಡಿದ ವೃದ್ಧ ದಂಪತಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನ ನಗರದ ಕರಿಗೌಡ ಕಾಲೊನಿಯಲ್ಲಿ ನಡೆದಿದೆ. ಡೇನಿಯಲ್ ಮತ್ತು ಪತ್ನಿ ಮೇರಿ ಆತ್ಮಹತ್ಯೆ ಮಾಡಿಕೊಂಡವರು.
ಸೋಮವಾರಪೇಟೆ ತಾಲೂಕಿನ ಹಾರೇಹೊಸೂರು ಗ್ರಾಮದ ಡೇನಿಯಲ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು ಐವತ್ತು ವರ್ಷಗಳ ಹಿಂದೆ ಮೇರಿ ಎಂಬವರನ್ನು ಮದುವೆಯಾಗಿದ್ದರು. ನೆಲ್ಸನ್, ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಡೇನಿಯಲ್ ಹಾರೇಹೊಸೂರಿನಲ್ಲಿ ಕಾಫಿ ತೋಟ, ಮನೆ ಸೇರಿದಂತೆ ಆಸ್ತಿ ಮಾಡಿ ಮಕ್ಕಳಿಗೆ ಮದುವೆ ಕೂಡ ಂಆಡಿಸಿದ್ದಾರೆ. ನೆಲ್ಸನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ವಿಲ್ಸನ್ ಹಾರೇಹೊಸೂರಿನಲ್ಲಿ ಕಾಫಿ ತೋಟ ನೋಡಿಕೊಂಡಿದ್ದ. ಕೆಲವು ವರ್ಷಗಳಿಂದ ಇಬ್ಬರೂ ಮಕ್ಕಳು ತಂದೆ-ತಾಯಿಗೆ ಊಟ, ತಿಂಡಿ ಕೊಡುತ್ತಿರಲಿಲ್ಲ. ಅನಾರೋಗ್ಯವಾದರೆ ಆಸ್ಪತ್ರೆಗೆ ಕರೆದೊಯ್ಯುತ್ತಿರಲಿಲ್ಲ. ಬೇಸತ್ತ ದಂಪತಿ ಕೆಲವು ದಿನಗಳಿಂದ ವಿರಾಜಪೇಟೆಯ ವೃದ್ಧಾಶ್ರಮದಲ್ಲಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ದಂಪತಿ ವೃದ್ಧಾಶ್ರಮದಿಂದ ಹೊರಟು ಸಾರಿಗೆ ಬಸ್ನಲ್ಲಿ ಬಂದು ಹಳಿ ಮೇಲೆ ಮಲಗಿ ರೈಲಿಗೆ ಸಿಲುಕಿ ಅಸು ನೀಗಿದ್ದಾರೆ.


