ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಬಸವನಗುಡಿ ಅವರೇಬೇಳೆ ಮೇಳದ 26ನೇ ಆವೃತ್ತಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.
ಅವರೇಬೇಳೆ ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, “ಹಣ್ಣುಗಳ ರಾಜ ಮಾವು ಹೇಗೋ ಅದೇ ರೀತಿ ಕಾಳುಗಳ ರಾಜ ಅವರೆಕಾಳು. ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ರಾಗಿ, ಜೋಳದ ಬೆಳೆ ಬೆಳೆಯುವಾಗ ಪಕ್ಕದಲ್ಲಿ ಅವರೇಕಾಳು ಸಾಮಾನ್ಯವಾಗಿ ಬೆಳೆಯುತ್ತಾರೆ. ಅವರೆಕಾಳು ನಮ್ಮೆಲ್ಲರ ನೆಚ್ಚಿನ ಖಾದ್ಯ. ವಾಸವಿ ಕಾಂಡಿಮೆಂಟ್ಸ್ ತಂಡದವರಿಂದ ಆಯೋಜನೆಯಾಗುತ್ತಿರುವ ಈ ಮೇಳದಿಂದ ನಮ್ಮ ಸಂಸ್ಕೃತಿ, ಇತಿಹಾಸವನ್ನ ಪಸರಿಸುವುದರ ಜೊತೆಗೆ ನಮ್ಮ ರೈತರಿಗೆ ವೇದಿಕೆ ಸಿಗಲಿ. ಬೆಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಅವರೇಬೇಳೆ ಮೇಳಕ್ಕೆ ಬರಲಿ” ಎಂದರು.
ಈ ಬಾರಿಯ ಆಕರ್ಷಣೆಗಳೇನು..?
ವಾಸವಿ ಕಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ಅವರು 2000ನೇ ಇಸವಿಯಲ್ಲಿ ಆರಂಭಿಸಿದ ಅವರೆಬೇಳೆ ಮೇಳ ಬೆಂಗಳೂರಿನ ಆಹಾರ, ಸಾಂಸ್ಕೃತಿಕ ಮತ್ತು ಪಾರಂಪರೆಯ ಪ್ರತೀಕವಾಗಿದೆ. ಈ ಬಾರಿ ಇನ್ನಷ್ಟು ವೈಭವದಿಂದ 4 ಜನವರಿ 2026ರ ವರೆಗೆ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಕಳೆದ 25 ವರ್ಷಗಳಿಂದಲೂ ನಿರಂತರವಾಗಿ ಆಯೋಜನೆಯಾಗುತ್ತಿರುವ ಅವರೆಬೇಳೆ ಮೇಳದಲ್ಲಿ ಬೇರೆ ಬೇರೆ ಜಿಲ್ಲೆಗಳ ರೈತರು ತಾವು ಬೆಳೆದ ಅವರೇಕಾಯಿಗಳನ್ನ ನೇರವಾಗಿ ಗ್ರಾಹಕರಿಗೆ ತಲುಪಿಸಬಹುದು. ಜೊತೆಗೆ ಅವರೇಕಾಳುಗಳಿಂದ ತಯಾರಿಸುವ ತರಹೇವಾರಿ ವಿಶಿಷ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಹುದು. ಈ ವರ್ಷ ನೀರುದೋಸೆ ಅವರೆಬೇಳೆ ಸಾಂಬಾರ್, ಅವರೇಕಾಯಿ ಮೊಮೋಸ್, ಅವರೇಬೇಳೆ ಗುಲಾಬ್ ಜಾಮೂನ್, ಐಸ್ ಕ್ರೀಂ, ಅವರೇಕಾಯಿ ಪೂರಿ, ಹೋಳಿಗೆ ಹಾಗೂ ಹಲ್ವ ಮುಂತಾದ ವಿಶೇಷ ಖಾದ್ಯಗಳು ಪ್ರಮುಖ ಆಕರ್ಷಣೆಯಾಗಿರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಆಹಾರ ಮಾತ್ರವಲ್ಲದೆ ಮನರಂಜನೆಗಾಗಿ 360 ಡಿಗ್ರಿ 5ಡಿ ಥಿಯೇಟರ್, ಅಮ್ಯೂಸ್ಮೆಂಟ್ ಜೋನ್, ಟ್ಯಾಟೂ, ಫೇಸ್ ಪೇಂಟಿಂಗ್, ನೈಲ್ ಆರ್ಟ್ಸ್ ಜೊತೆಗೆ ಕುಟುಂಬ ಸಮೇತ ಸಮಯ ಕಳೆಯಲು ಸೂಕ್ತವಾದ ಸೌಲಭ್ಯಗಳನ್ನು ಮೇಳದಲ್ಲಿ ಒದಗಿಸಲಾಗಿದೆ.
ಮೇಳಕ್ಕೆ ಆಗಮಿಸುವವರಿಗೆ ಸುಗಮ, ಸುರಕ್ಷಿತ ಅನುಭವ ಕಲ್ಪಿಸುವ ಉದ್ದೇಶದಿಂದ ಪ್ರಥಮ ಚಿಕಿತ್ಸೆ ಕೇಂದ್ರ, ಫೀಡಿಂಗ್ ಬೂತ್, ವ್ಹೀಲ್ ಚೇರ್ ಪ್ರವೇಶ ಸೌಲಭ್ಯ, ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯಗಳು, ಮಾಹಿತಿ ಮತ್ತು ಸಹಾಯ ಕೇಂದ್ರ, ಭದ್ರತಾ ಸಿಬ್ಬಂದಿ, ಅಂಬ್ಯುಲೆನ್ಸ್ ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನ ವ್ಯವಸ್ಥಿತವಾಗಿ ಒದಗಿಸಲಾಗಿದೆ.
ಮೇಳವು ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಜನ ಅವರೆಬೇಳೆ ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಇನ್ನಷ್ಟು ಆಕರ್ಷಣೆಯೊಂದಿಗೆ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


