ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಡಿಎಂಕೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ವಿಜಯ್ಗೆ ವಿಶ್ವಾಸಮತ ಪರೀಕ್ಷೆ ಎದುರಾಗಿದ್ದು, ಅವರು ಅದರಲ್ಲಿ ಗೆಲುವು ಕಾಣುವ ಮೂಲಕ ಸರ್ಕಾರ ಭದ್ರವಾಗಿದೆ.
ವಿಧಾನಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ವಿಜಯ್ ವಿಶ್ವಾಸ ಮತ ಯಾಚಿಸಿದ್ದರು. ಕಾಂಗ್ರೆಸ್ ಸೇರಿದಂತೆ ಹಲವು ಮೈತ್ರಿ ಪಕ್ಷಗಳು ಬೆಂಬಲ ಸೂಚಿಸಿವೆ. ಹಾಜರಿದ್ದ ಶಾಸಕರ ಒಟ್ಟು ಮತಗಳ ಆಧರಿಸಿ ಬೆಂಬಲ ನಿರ್ಧರಿಸಲಾಗಿದೆ. ವಿಜಯ್ ಅವರ ಸರ್ಕಾರಕ್ಕೆ 144 ಶಾಸಕರು ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಭರ್ಜರಿಯಾಗಿಯೇ ವಿಶ್ವಾಸಮತ ಗೆದ್ದುಕೊಂಡಿದೆ.
ವಿಶ್ವಾಸ ಮತ ಗೆದ್ದ ಸರ್ಕಾರ ಆರು ತಿಂಗಳು ನಿರಾತಂಕವಾಗಿರಲಿದೆ. ಆರು ತಿಂಗಳ ನಂತರ ಶಾಸಕರು ಇದೇ ರೀತಿ ಬೆಂಬಲ ನೀಡಿದರೆ ಸರ್ಕಾರ ಮತ್ತೆ ಸುರಕ್ಷಿತವಾಗಲಿದೆ.
ವಿವಾದ ಸೃಷ್ಟಿಸಿದ ವಿಶೇಷ ಕರ್ತವ್ಯಾಧಿಕಾರಿ ನೇಮಕ
ವಿಜಯ್ ಮುಖ್ಯಮಂತ್ರಿಯಾದ ನಂತರ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನೇಮಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್, ಹಿಂದೊಮ್ಮೆ ವಿಜಯ್ ಸಿಎಂ ಆಗ್ತಾರೆ,ಇದೊಂದು ಥರ ಸುನಾಮಿ ಜಾತಕ ಎಂದು ಹೇಳಿದ್ದರು.
ವಿಜಯ್ ಇಂದು ಮುಖ್ಯಮಂತ್ರಿ ಆಗಿದ್ದಾರೆ. ಇದೇ ಕಾರಣ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ (ರಾಜಕೀಯ) ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸರ್ಕಾರದಲ್ಲಿ ಜ್ಯೋತಿಷಿಯೊಬ್ಬರನ್ನು ರಾಜಕೀಯ ಸಲಹೆಗಾರರನ್ನಾಗಿ ನೇಮಿಸಿದ ಬಗ್ಗೆ ವಿವಾದ ಭುಗಿಲೆದ್ದಿದೆ. ಟಿವಿಕೆ ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುತ್ತಿರುವ ಸಿಪಿಐ(ಎಂ) ಈ ನಿರ್ಧಾರವನ್ನು ಟೀಕಿಸಿದೆ.
ಕಾಂಗ್ರೆಸ್, ಸಿಪಿಐ(ಎಂ) ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕರು ಈ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ, ವಿಜಯ್ ಈ ಕ್ರಮವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.


