ಕಾನ್ಪುರ ಗಂಗಾನದಿ ದಡದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ಕರ್ನಾಟಕ ಮೂಲದ ಪೈಲಟ್ ಸೇರಿ ಇಬ್ಬರು ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗಾರ್ಗ್ ಏವಿಯೇಷನ್ಗೆ ಸೇರಿದ್ದ ಟೆಕ್ನಮ್ ವಿಮಾನವು ಗುರುವಾರ ಬೆಳಗ್ಗೆ 11.30ಕ್ಕೆ ಟೇಕ್ ಆಫ್ ಆಗಿ 20 ನಿಮಿಷಗಳ ನಂತರ ಕತ್ರಿ ಪ್ರದೇಶದ ನಾಥಪೂರ್ವ ಗ್ರಾಮದ ಬಳಿ ಪತನಗೊಂಡಿದೆ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.
ತರಬೇತುದಾರರಾಗಿದ್ದ ಗುಜರಾತ್ ಮೂಲದ ಸಚಿನ್ ಭಾಟಿಯಾ ಮತ್ತು ತರಬೇತಿ ಪಡೆಯುತ್ತಿದ್ದ ಕರ್ನಾಟಕದ ಅಭಿಷೇಕ್ ಪೂಜಾರಿ ಮೃತಪಟ್ಟವರು. ಪೊಲೀಸ್ ಆಯುಕ್ತ ರಘುವೀರ್ ಲಾಲ್, ಜೆಸಿಪಿ ಸಂಕಲ್ಪ್ ಶರ್ಮಾ ಮತ್ತು ಕೇಂದ್ರ ಡಿಸಿಪಿ ಅತುಲ್ ಶ್ರೀವಾಸ್ತವ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ನಾಲ್ಕು ಆಸನಗಳ ವಿಮಾನ ಇದಾಗಿದ್ದು, ಪತನಕ್ಕೆ ಕಾರಣ ಏನು ಎಂಬ ಬಗ್ಗೆ ಹೆಚ್ಚಿನ ತಾಂತ್ರಿಕ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ರಘುವೀರ್ ಲಾಲ್ ತಿಳಿಸಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ಪಘಾತದ ತನಿಖೆ ಕೈಗೊಂಡಿದೆ. ಅಪಘಾತದ ಸ್ಥಳದಲ್ಲಿ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಯಾವುದಾದರೂ ವಸ್ತುವಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಅಪಘಾತಕ್ಕೆ ಏನು ಕಾರಣ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ.


