Tuesday, September 01, 2026
Menu

ಶಿವರಾಮ ಕಾರಂತ ಬಡಾವಣೆ: ಭೂಮಿ ಮಾಲೀಕರಿಗೆ ಭೂ ಪರಿಹಾರ ವಿತರಿಸಿದ ಸಿಎಂ

ನಾನೊಬ್ಬ ರೈತರ ಮಗ, ರೈತ ಆಸ್ತಿ ಕಳೆದುಕೊಳ್ಳಬೇಕಾದರೆ ಆಗುವ ನೋವಿನ ಅರಿವಿದೆ. ಆ ನೋವನ್ನು ಕಡಿಮೆ ಮಾಡಬೇಕೆನ್ನುವ ಉದ್ದೇಶವೂ ಇದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಡಾ ಕೆ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ಭೂಮಾಲೀಕರು, ರೈತರಿಗೆ ನೆಹರು ತಾರಾಲಯದಲ್ಲಿ ಶಿವಕುಮಾರ್ ಭೂ ಪರಿಹಾರ ವಿತರಿಸಿ ಮಾತನಾಡಿದರು. ಮೂರು ವರ್ಷಗಳಿಂದಲೇ ಪರಿಹಾರ ನೀಡುವ ಪ್ರಯತ್ನ ಮಾಡಿ ಅರ್ಜಿಗಳನ್ನು ಕರೆಯಲಾಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಶಿವರಾಮ ಕಾರಂತ ಬಡವಾಣೆಯ ಭೂ ಮಾಲೀಕರಿಗೆ ಪರಿಹಾರ ನೀಡುವುದು ತಡವಾಯಿತು. ನಿವೇಶನ ಹಂಚಿಕೆಗೆ ಅರ್ಜಿ ಹಾಕಲು ಆಹ್ವಾನ ನೀಡಲು ಮುಂದಾದಾಗ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ ₹1000 ಕೋಟಿ ನಷ್ಟವಾಗಿದೆ ಎಂದು  ಹೇಳಿದರು.

ಬಿಡದಿ ಕೈಗಾರಿಕಾ ಟೌನ್ ಮಾಡಲು ಮಾಜಿ ಮುಖ್ಯಮಂತ್ರಿ ದೇವೇಗೌಡರು ಹೊರಟರು. ಆಗ ರೈತರ ಬಳಿ ಚರ್ಚಿಸಿ 5-6 ಲಕ್ಷ ರೂ.ಗಳಂತೆ ಪ್ರತಿ ಎಕರೆಯಂತೆ ಜಮೀನು ಪಡೆಯಲಾಗಿತ್ತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಿಡದಿಯಲ್ಲಿಯೇ ಟೌನ್ ಶಿಪ್ ಮಾಡಲು ಅಧಿಸೂಚನೆ ಹೊರಡಿಸಿದ್ದ ಸ್ಥಳದಲ್ಲಿಯೇ ಜಪಾನ್ ಟೌನ್ ಶಿಪ್ ಮಾಡಲು ಮುಂದಾದ ಸಂದರ್ಭದಲ್ಲಿ ವಿರೋಧ ವ್ಯಕ್ತವಾದ ಕಾರಣಕ್ಕೆ ಅದನ್ನು ಕೈಬಿಡಲಾಯಿತು. ಅರ್ಕಾವತಿ, ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಇವೆಲ್ಲ ಈಗ ಆಗಿದೆ. ಬೆಂಗಳೂರು ಸುತ್ತಮುತ್ತ ಬಡಾವಣೆಗಳು ನಿರ್ಮಾಣಗೊಳ್ಳಲು ಎಲ್ಲಾ ಸರ್ಕಾರಗಳು ಕೊಡುಗೆ ನೀಡಿವೆ ಎಂದು ತಿಳಿಸಿದರು.

ಶಿವರಾಮ ಕಾರಂತ ಬಡಾವಣೆಗೆ ಜಮೀನುಕೊಟ್ಟ 3200 ರೈತರ ಹೆಸರುಗಳನ್ನು ವಾಲ್ ಆಫ್ ಗ್ರಾಟಿಟ್ಯೂಡ್ ಮೇಲೆ ಬರೆಸಲಾಗುವುದು. ಅರ್ಕಾವತಿ, ಕೆಂಪೇಗೌಡ ಬಡಾವಣೆಗಳ ವಿಚಾರದಲ್ಲಿ ತಕರಾರು ನಡೆಯಿತು.  ಶಿವರಾಮ ಕಾರಂತ ಬಡಾವಣೆಯ ಪ್ರಕ್ರಿಯೆಯೂ ಹಲವು ವರ್ಷಗಳ ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಒಳಗೊಂಡಿತ್ತು. ಬಡಾವಣೆ ನಿರ್ಮಾಣಕ್ಕೆ 16 ಸಾವಿರ ಕೋಟಿ ಹೂಡಿಕೆಯಾಗಿದೆ.‌ ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಚಾರಗಳು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠದ ಹಂತಗಳನ್ನು ದಾಟಿ ಸುಪ್ರೀಂ ಕೋರ್ಟ್ ವರೆಗೂ ಸಾಗಿದ್ದವು. ನ್ಯಾಯಾಲಯಗಳ ನಿರ್ದೇಶನಗಳು ಹಾಗೂ ಸರ್ಕಾರದ ಆದೇಶಗಳ ಹಿನ್ನೆಲೆಯಲ್ಲಿ ಬಿಡಿಎ ಭೂಸ್ವಾಧೀನ ಮತ್ತು ಬಡಾವಣೆಯ ಅಭಿವೃದ್ಧಿ ಪ್ರಕ್ರಿಯೆಯನ್ನು ಮುಂದುವರಿಸಿದೆ ಎಂದರು.

ಖಾಸಗಿಯವರಿಗೆ 55% ನಿವೇಶನ ನೀಡಲು ಸಾಧ್ಯವಾಗುತ್ತದೆ. ಆದರೆ ನಾವು ಅತ್ಯುತ್ತಮ ರಸ್ತೆಗಳು, ಸಾರ್ವಜನಿಕ ಸೌಲಭ್ಯ ಕಲ್ಪಿಸಿದ್ದು, 42% ಮಾತ್ರ ನಿವೇಶನಗಳನ್ನು ನೀಡಲು ಸಾಧ್ಯವಾಗಿದೆ. ಎಕರೆಗೆ ಶೇ. 40% ಕೊಡಲು ಭೂ ಮಾಲೀಕರಿಗೆ ನಿವೇಶನ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಮಲ್ಲೇಶ್ವರ, ಚಾಮರಾಜಪೇಟೆ, ಜಯನಗರ, ಇಂದಿರಾನಗರದ ಸ್ವಲ್ಪ ಭಾಗ ಬಿಟ್ಟರೆ ಬೇರೆ ಪ್ರದೇಶಗಳು ಯೋಜಿತ ಬಡಾವಣೆಗಳಲ್ಲ. ಎಲ್ಲಿಯೂ ನೂರು ಅಡಿ ರಸ್ತೆಗಳಿಲ್ಲ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ 8 ಲಕ್ಷ ಇದ್ದ ಬೆಂಗಳೂರು ಜನಸಂಖ್ಯೆ ಈಗ ಒಂದೂವರೆ ಕೋಟಿ ಆಗಿದೆ. 60 ಲಕ್ಷ ಜನ ನಿತ್ಯ ಬೆಂಗಳೂರಿಗೆ ಓಡಾಡುತ್ತಾರೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಾದ ಕೋಲಾರ, ರಾಮನಗರ, ಚನ್ನಪಟ್ಟಣ, ತುಮಕೂರು, ಮಾಗಡಿ, ಕುಣಿಗಲ್, ಮದ್ದೂರು, ಮಂಡ್ಯ ಕ್ಷೇತ್ರದಿಂದ 30-50 ಸಾವಿರ ಜನ ಬೆಂಗಳೂರು ಸೇರಿದ್ದಾರೆ. ಈಶಾನ್ಯ ರಾಜ್ಯಗಳಿಂದ 11 ಲಕ್ಷ ಜನ ಉದ್ಯೋಗ‌ ಅರಸಿ ಬಂದಿದ್ದಾರೆ. 1.40 ಕೋಟಿ ವಾಹನಗಳಿವೆ. ರಸ್ತೆಗಳು ಮಾತ್ರ ಹಾಗೇ ಇದೆ. ಅಕ್ಕಪಕ್ಕದ ಕಟ್ಟಡಗಳನ್ನು ಒಡೆದು ಈ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂದು ವಿವರಿಸಿದರು.

ನಾನು ಬರುವ ಮೊದಲು ಬಿಡಿಎ ಎಂದರೆ ಬ್ರೋಕರ್ ಅಭಿವೃದ್ಧಿ ಪ್ರಾಧಿಕಾರವಾಗಿತ್ತು. 2008 ರಲ್ಲಿಯೇ ಶಿವರಾಮ ಕಾರಂತ ಬಡಾವಣೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರು. ತಮ್ಮ ಭೂಮಿ ಕಳೆದುಕೊಳ್ಳುವಾಗ ರೈತರು ಲಂಚ ಕೊಡಬೇಕಾದ ಪರಿಸ್ಥಿತಿ ಇತ್ತು. ಆಗ “ರೈತರ ಮಕ್ಕಳು” ಎಂದು ಹೇಳಿಕೊಳ್ಳುವವರ ಕಾಲದಲ್ಲಿಯೇ 2008 ರಲ್ಲಿಯೇ ಅಧಿಸೂಚನೆ ಹೊರಡಿಸಿದ್ದು,  ಈಗ ಮಾತನಾಡಲು ಅವರಿಗೆ ಧಮ್ ಇಲ್ಲವೇ ಬೆಂಗಳೂರಿನ ಸುತ್ತಮುತ್ತ ಅವರ ಜಮೀನುಗಳಿವೆ. ಅವುಗಳನ್ನು ಯೋಜನೆಗಳ ಸ್ವಾಧೀನಕ್ಕೆ ಕೊಟ್ಟಿದ್ದಾರೆಯೇ? ಅವರ ಜಮೀನನ್ನು ಮಾತ್ರ ಬಿಡಿಸಿಕೊಂಡರು. ಅವರದ್ದು ಎಷ್ಟು ಎಕರೆ ಇದೆ ಎಂಬುದು ನನಗೆ ಅರಿವಿದೆ” ಎಂದು‌ ಪರೋಕ್ಷವಾಗಿ ಕುಟುಕಿದರು.

ರೈತರು ಅಲೆಯಬಾರದು, ಲಂಚ ಕೊಡಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಮ್ಮ ಭೂಮಿಯಲ್ಲಿಯೇ ನಿವೇಶನಗಳನ್ನು ಕೋರಿದವರಿಗೆ ನಿವೇಶನಗಳನ್ನು ಅಲ್ಲಿಯೇ ನೀಡಲಾಗುತ್ತಿದೆ. ಆದರೆ ನಿವೇಶನಗಳನ್ನು ಮಾರಿಕೊಳ್ಳಬೇಡಿ. ಕಷ್ಟ ಎಲ್ಲರಿಗೂ ಬರುತ್ತದೆ. ನಂತರದ ದಿನಗಳಲ್ಲಿ ಈ ನಿವೇಶನಗಳ ಬೆಲೆ ನೀವು ಊಹಿಸಲು ಸಾಧ್ಯವಿಲ್ಲ ಎಂದರು.

ಬಡಾವಣೆಯು 3,700 ಎಕರೆಯಲ್ಲಿ ನಿರ್ಮಾಣವಾಗಿದೆ. 3 ಕೋಟಿಯಷ್ಟು ಚದರ ಅಡಿ ನಿವೇಶನವನ್ನು ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. 2008ರಿಂದೀಚೆಗೆ ಸಮಯ ವ್ಯರ್ಥವಾಗಿದೆ. ಪ್ರತಿಯೊಂದರ ಬೆಲೆಯೂ ಹೆಚ್ಚಳವಾಗಿದೆ. ಹಾಗಾಗಿ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ಸಮಯಾವಕಾಶ ಅಗತ್ಯವಿದೆ. 26,000 ಕೋಟಿ ಸಾಲ ಪಡೆದು ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣವಾಗುತ್ತಿದೆ ಎಂದರು.

ಪೆರಿಫೆರಲ್ ರಸ್ತೆಗೆ ಟೆಂಡರ್ ಕರೆದಿದ್ದು, ಕೋಗಿಲು ತನಕ ಕಾಮಗಾರಿ ನಡೆಯುತ್ತಿದೆ. ಶೇ 80ರಷ್ಟು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಲಾಗಿದೆ. ಈ ರಸ್ತೆ ಪೂರ್ಣವಾದ ಬಳಿಕ ನಿಮ್ಮ ಆಸ್ತಿಯ ಬೆಲೆ ದುಪ್ಪಟ್ಟಾಗಲಿದೆ ಎಂದು ಹೇಳಿದರು.

 

Related Posts

Leave a Reply

Your email address will not be published. Required fields are marked *