ಪಾರ್ಟಿಯಲ್ಲಿ ಚಿಕನ್ಪೀಸ್ ತಿನ್ನುವ ವಿಚಾರಕ್ಕೆ ಆರಂಭಗೊಂಡ ಕ್ಷುಲ್ಲಕ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಬೆಳಗಾವಿಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ.
ಸೀತಾರಾಮ್ ಕೊಲೆಯಾಗಿದ್ದು, ಅರುಣ್ಕುಮಾರ್ ಕೊಲೆ ಮಾಡಿದಾತ. ಇವರಿಬ್ಬರೂ ಉತ್ತರ ಪ್ರದೇಶದ ಪಿಲಿಪತ್ ಜಿಲ್ಲೆಯ ಕಬೀರಗಂಜ್ ಗ್ರಾಮದ ನಿವಾಸಿಗಳಾಗಿದ್ದು, ಮೂಡಲಗಿ ಪಟ್ಟಣದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಇಬ್ಬರೂ ಸೇರಿ ಚಿಕನ್ ಪಾರ್ಟಿ ಮಾಡುವಾಗ ಹೆಚ್ಚು ಚಿಕನ್ ಪೀಸ್ ಬೇಕು ಎಂಬ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಜಗಳ ತಾರಕಕ್ಕೇರಿ ಆರೋಪಿ ಚಾಕುವಿನಿಂದ ಸೀತಾರಾಮ್ ಎದೆಗೆ ಇರಿದಿದ್ದಾನೆ. ಗಾಯಗೊಂಡ ಸೀತಾರಾಮ್ನನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಕಟ್ಟಡದ ಮೇಲಿಂದ ಬಿದ್ದಿದ್ದಾನೆ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದ.
ಘಟಪ್ರಭಾ ಠಾಣೆ ಪೊಲೀಸರು ಭೇಟಿ ನೀಡಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸೀತಾರಾಮ್ ಮೃತಪಟ್ಟಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡಕ್ಕೆ ಬಂದ ರೈಲಿನಲ್ಲಿ ಮಹಿಳೆಯ ಶವ ಪತ್ತೆ
ಸೊಲ್ಲಾಪುರದಿಂದ ಧಾರವಾಡಕ್ಕೆ ಬಂದಿದ್ದ ರೈಲಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ರಾತ್ರಿ ಸೊಲ್ಲಾಪೂರದಿಂದ ಹೊರಟಿದ್ದ ರೈಲು ಬೆಳಗ್ಗೆ ಧಾರವಾಡ ತಲುಪಿತ್ತು. ಮಹಿಳೆಯ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ರೈಲ್ವೆ ಸಿಬ್ಬಂದಿ ಬೋಗಿ ಸ್ವಚ್ಛ ಮಾಡಲು ಬಂದಾಗ ಶವ ಕಂಡು ಬಂದಿದೆ.
ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹಿಳೆ ಯಾರು ಎಂದು ಗುರುತು ಪತ್ತೆಯಾಗಿಲ್ಲ. ರೈಲ್ವೆ ಪೊಲೀಸರು ಮತ್ತು ಧಾರವಾಡ ವಿದ್ಯಾಗಿರಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.


