ದೊಡ್ಡಬಳ್ಳಾಪುರ ನಗರ ರೈಲು ನಿಲ್ದಾಣದಲ್ಲಿ ನಡೆದ ಅಪಘಾತದಲ್ಲಿ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ. ಶನಿವಾರ-ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಮೊಮ್ಮಕಳಿಬ್ಬರು ಅಜ್ಜಿ ಮನೆಗೆ ಬಂದಿದ್ದರು.
ಬೇಗ ಮನೆಗೆ ವಾಪಸ್ ಹೋಗಿ ಶಾಲೆಗೆ ತೆರಳಬೇಕೆಂದು ರೈಲು ಹತ್ತಲು ಅವಸರವಾಗಿ ಹಳಿ ದಾಟುತ್ತಿದ್ದಾಗ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಮೂವರ ದೇಹ ದಿಕ್ಕಾಪಾಲಾಗಿ ಬಿದ್ದಿದೆ.
ಪಾಲನಜೋಗಹಳ್ಳಿ ನಿವಾಸಿ ಇರ್ಫಾನ ( 46 ) ರುಕಿಯಾ ( 13 ) ರಾಕಿಯಾ ( 08 ) ಮೃತಪಟ್ಟವರು. ಮಕ್ಕಳು ಶಾಲೆ ರಜೆ ಇದೆ ಎಂದು ಹಿಂದೂಪುರದಿಂದ ಅಜ್ಜಿ ಮನೆಗೆ ಬಂದಿದ್ದರು. ದಿನ ರಜೆ ಮುಗಿಸಿ ಬೆಳಗ್ಗೆ ಶಾಲೆಗೆ ಹೋಗಬೇಕು ಎಂದು ಅಜ್ಜಿ ಜೊತೆ ಹಿಂದೂಪುರ ಪ್ಯಾಸೆಂಜರ್ ರೈಲು ಹತ್ತಲು ಬರುತ್ತಿದ್ದರು.
ನಿಲ್ದಾಣದಲ್ಲಿ ಸ್ಕೈ ವಾಕ್ ಇಲ್ಲದ ಕಾರಣ ರೈಲು ಹಳಿ ದಾಟುವ ಪ್ರಯತ್ನದಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ. ದೊಡ್ಡಬಳ್ಳಾಪುರ ನಗರದ ರೈಲು ನಿಲ್ದಾಣಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


