ಪೋಕ್ಸೊ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಬಿಡುಗಡೆಗೊಂಡಿದ್ದ ಯುವಕನನ್ನು ಬಾಲಕಿಯ ತಂದೆಯೇ ಕೊಲೆಗೈದಿರುವ ಘಟನೆ ಯಲಹಂಕ ಬಳಿ ನಡೆದಿದೆ. ರಮೇಶ್ ಕೊಲೆಯಾದ ಯುವಕ. ಆತ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ, ಯಲಹಂಕದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸವಾಗಿದ್ದ. ರಾಜಕಾಲುವೆಯಲ್ಲಿ ಶವ ಪತ್ತೆಯಾದ ಬಳಿಕ ಪೊಲೀಸರು ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಲಕಿಯ ತಂದೆ, ಚಿನ್ನಯ್ಯ ಮಾತಪತಿ (29), ಚೇತನ ಮದಾರ (26) ಮತ್ತು ವಿನಾಯಕ ಗುರುವ (19) ಎಂಬವರನ್ನು ಬಂಧಿಸಲಾಗಿದೆ. ರಮೇಶ್ ಹಾಗೂ ಹಾಗೂ ಬಾಲಕಿ ಸಂಬಂಧಿಕರಾಗಿದ್ದು, ಇಬ್ಬರ ನಡುವೆ ಪ್ರೀತಿಯ ಸಂಬಂಧ ಇತ್ತು ಎಂದು ತಿಳಿದುಬಂದಿದೆ. 2022ರಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ರಮೇಶ್ ವಿರುದ್ಧ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಶಿಕ್ಷಣಕ್ಕಾಗಿ ಪೋಷಕರು ಬೆಂಗಳೂರಿಗೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ರಮೇಶ್ ಬಾಲಕಿ ಬೆಂಗಳೂರಿನಲ್ಲಿ ಇದ್ದುದನ್ನು ತಿಳಿದು ಬಂದಿದ್ದ ಎನ್ನಲಾಗಿದೆ.
ಬಾಲಕಿಯ ತಂದೆ ರಮೇಶ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿ ಸ್ನೇಹಿತರಾದ ಚಿನ್ನಯ್ಯ, ಚೇತನ ಮತ್ತು ವಿನಾಯಕರನ್ನು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿ ರಮೇಶ್ನನ್ನು ಹತ್ಯೆ ಮಾಡುವಂತೆ ಹೇಳಿದ್ದರು. ಅದರಂತೆ ಆರೋಪಿಗಳು ರಮೇಶ್ನ್ನು ಬಾರ್ಗೆ ಕರೆದುಕೊಂಡು ಹೋಗಿ ಬಳಿಕ ಹತ್ಯೆ ಮಾಡಿ ಲ್ಲಾಳಸಂದ್ರ ರಾಜಕಾಲುವೆಗೆ ಶವ ಎಸೆದಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


