ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ದಾರೆ. ಆದರೆ ಯಾರೇ ಸಿಎಂ ಆದರೂ ರಾಜ್ಯದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಶೂನ್ಯವಾದ ಭ್ರಷ್ಟಾಚಾರ ಸರ್ಕಾರವು ಶಿಕ್ಷಣ ನೀತಿ ಕೊಡಲು ಆಗದೆ ಜಾತಿಯ ವಿಷ ಬೀಜ ಬಿತ್ತುತ್ತಿದೆ. ಅಲ್ಪ ಸಂಖ್ಯಾತರ ಓಲೈಕೆ ಮಾಡುತ್ತಿದೆ. ಬರುವ ದಿನಗಳಲ್ಲಿ ಎಳೆ ಎಳೆಯಾಗಿ ಎಲ್ಲಾ ಬಿಚ್ಚಿಡುತ್ತೇನೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೇವೆ. ಕಾಂತರಾಜು ವರದಿ ಕಸದ ಬುಟ್ಟಿಗೆ ಹಾಕಿದ್ದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಮೂರು ವರ್ಷ ಸರ್ಕಾರದ ವೈಫಲ್ಯ ಒಂದು ಕಡೆ ಆದ್ರೆ, ಸಿದ್ದರಾಮಯ್ಯ ಬೆಂಬಲಿಗರ ನಡುವೆ ಸರಿದೂಗಿಸಿಕೊಳ್ಳುವುದರಲ್ಲಿ ಉಳಿದ ಸಮಯ ಕಳೆದು ಹೋಗುತ್ತದೆ ಎಂದು ಲೇವಡಿ ಮಾಡಿದರು. ದೆಹಲಿ ಪ್ರವಾಸ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಗೆ ಶುಭ ಸುದ್ದಿ ತರಲು ಹೋಗಿದ್ದೆ ಶುಭ ಸುದ್ದಿ ತಂದಿದ್ದೇನೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಆಳಂದ ನಗರದ ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಅಡ್ಡಿಪಡಿಸಿದ ಗುಂಡಾಗಳ ಮೇಲಿನ ಕೇಸ್ ವಾಪಸ್ ಪಡೆದಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಸರ್ದಾರ ವಲ್ಲಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಆಳಂದ ರಾಘವ ಚೈತನ್ಯ ಪೂಜೆಗೆ ಅಡ್ಡಿ ಪಡಿಸಿದ ಗುಂಡಾಗಳ ವಿರುದ್ಧ ಹಾಕಿರುವ ಕೇಸನ್ನು ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಆಳಂದ ಲಾಡ್ಲೆ ಮಶಾಕ ದರ್ಗಾ ಗಲಾಟೆ ಕೇಸ್ ವಾಪಸ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಲಜ್ಜೆ ಗೆಟ್ಟ ಸರ್ಕಾರವಾಗಿದೆ. ಹಿಂದೂಗಳ ಮೇಲೆ ಹಲ್ಲೆ ಮಾಡಿದ ದೇಶದ್ರೋಹಿಗಳ ಮೇಲೆ ದಾಖಲಾದ ಪ್ರಕರಣ ಸರ್ಕಾರ ವಾಪಸ್ ಪಡೆದಿದೆ. ಯಾರು ಧರ್ಮವನ್ನು ರಕ್ಷಣೆ ಮಾಡ್ತಾರೋ ಅವರನ್ನು ಧರ್ಮ ರಕ್ಷಣೆ ಮಾಡುತ್ತೆ. ಆದರೆ ಕಾಂಗ್ರೆಸ್, ಅಧರ್ಮದ ಹಾದಿಯಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕುಲು ಹಿಂದುಗಳು ಸಿದ್ದರಾಗಿದ್ದಾರೆ. ಕಳೆದ ಮೂರು ವರ್ಷದ ಅವರ ಆಡಳಿತ ವೈಖರಿ ಹೇಳುತ್ತಿದೆ. ಕಳೆದ ಮೂರು ವರ್ಷದಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಬಂದ್ರು ನೀವು ಗೆಲ್ಲೂವುದಿಲ್ಲ ಎಂದರು.
ಆಳಂದ ಶಾಸಕ ಬಿ ಆರ್ ಪಾಟೀಲ್ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿ, ಹಿಂದೂಪರ ಕಳಕಳಿ, ಸ್ವಾಭಿಮಾನ ಇದ್ರೆ ರಾಜೀನಾಮೆ ಕೊಡಬೇಕಿತ್ತು ಎಂದರು. ಶಿಕ್ಷಣ ಸಚಿವರ ವಿರುದ್ದವೂ ಆಕ್ರೋಶ ಹೊರಹಾಕಿದ ವಿಜಯೇಂದ್ರ, ನಾಲಾಯಕ್ ಶಿಕ್ಷಣ ಸಚಿವ ಹಿಜಾಬ್ ಗೆ ಅನುಮಾತಿ ನೀಡೋದಾಗಿ ಹೇಳ್ತಾನೆ. ಶಾಲಾ-ಕಾಲೇಜಿಗೆ ಸಮವಸ್ತ್ರ ಮಾಡೋದು ಎಲ್ಲರೂ ಒಂದೇ ಎಂದು. ಸರ್ಕಾರ ಹಿಜಾಬ್ ಗೆ ಅನುಮತಿ ನೀಡಿ ಶಾಲೆ ಕಾಲೇಜು ಮಕ್ಕಳಲ್ಲೂ ದ್ವೇಷ ಹುಟ್ಟುಹಾಕುತ್ತಿದೆ. ರಾಜಾದ್ಯಂತ ಹಿಂದೂಗಳ ರಕ್ಷಣೆ ಮಾಡೋದಕ್ಕೆ ಜಿಲ್ಲಾಧ್ಯಕ್ಷರಿಗೆ ಕರೆ ಕೊಟ್ಟಿರುವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾದ ಕೇಸ್ ವಾಪಸ್ ಪಡೆಯುತ್ತೇವೆ ಎಂದು ಬಿ ವೈ ವಿಜಯೇಂದ್ರ ಹೇಳಿದರು.


