ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಚನ್ನಸಂದ್ರದಲ್ಲಿ ನಡೆದಿದೆ.
ಪಾಪಣ್ಣ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೀಡಿಯೊ ಮಾಡಿಟ್ಟು ನಯನಾ ಎಂಬಾಕೆ ವಿರುದ್ಧ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಮಾಡಿದ್ದಾರೆ. ನಯನಾ ಎಂಬ ಮಹಿಳೆ ನನ್ನ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲು ಮಾಡಿಸಿ 10 ಲಕ್ಷ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇವರಿಂದ ನಮ್ಮ ಕುಟುಂಬವನ್ನು, ನನ್ನ ತಂಗಿಯನ್ನು ಕಾಪಾಡಿ ಎಂದು ಪಾಪಣ್ಣ ವೀಡಿಯೊದಲ್ಲಿ ಮನವಿ ಮಾಡಿದ್ದಾರೆ.
ಈ ಹಿಂದೆ 2021 ರಲ್ಲಿ ಜಾತಿ ನಿಂದನೆ ಕೇಸ್ ದಾಖಲಿಸಿದ್ದು, ವಾಪಸ್ ಪಡೆಯಲು 10 ಲಕ್ಷ ಪಡೆದಿದ್ದರು. ಈಗ ಮತ್ತೊಂದು ನಕಲಿ ಕೇಸ್ ದಾಖಲಿಸಿ ಹಣಕ್ಕೆ ಪೀಡಿಸುತ್ತಿದ್ದಾರೆ. ನಾನು ಬಡ ವ್ಯಾಪಾರಿ, ಮನೆಯಲ್ಲಿ ಬೇರೆ ಯಾರೂ ಕೆಲಸಕ್ಕೆ ಹೋಗುವವರಿಲ್ಲ, ಪೊಲೀಸರು ನಯನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಪಣ್ಣ ವೀಡಿಯೊನಲ್ಲಿ ಮನವಿ ಮಾಡಿದ್ದಾರೆ.
ಪಾಪಣ್ಣ ಅವರ ತಂಗಿ ಭಾಗ್ಯಶ್ರೀ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಜೋಗಿ ಸೀನಾ, ಪ್ರಶಾಂತ್, ಸಂತೋಷ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


