ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಅಪ್ರಾಪ್ತ ವಯಸ್ಕ ಜೋಡಿಯಲ್ಲಿ ಬಾಲಕಿ ಮತ್ತೊಬ್ಬನಿಗೆ ಮೆಸೇಜ್ ಮಾಡುತ್ತಿರುವುದನ್ನು ಗಮನಿಸಿದ ಬಾಲಕ ಆಕೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಕೊಲೆಯನ್ನು ಮುಚ್ಚಿ ಹಾಕಲು ಆರೋಪಿ ಬಾಲಕ ಇತರ ಇಬ್ಬರೊಂದಿಗೆ ಸೇರಿ ಮೃತದೇಹವನ್ನು ಕೃಷಿ ಜಮೀನಿನಲ್ಲಿ ಹೂತುಹಾಕಿದ್ದ. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಲನಾಥ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಪೋಷಕರು ನಾಪತ್ತೆ ದೂರು ನೀಡಿದ ಬಳಿಕ ಪೊಲೀಸರ ತನಿಖೆ ವೇಳೆ ಕೊಲೆ ನಡೆದು ಒಂದು ವಾರದ ಬಳಿಕ ಬಯಲಾಗಿದೆ.
ಸಾತನೂರಿನ ವೆಂಕಟರಾಯದೊಡ್ಡಿಯ ನಿವಾಸಿಯಾಗಿದ್ದ ಸಂತ್ರಸ್ತೆ 9ನೇ ತರಗತಿಯಲ್ಲಿ ಶಿಕ್ಷಣ ತೊಎದಿದ್ದಳು. 16 ವರ್ಷದ ಆರೋಪಿ ಕೂಡ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟಿದ್ದ. ಬಂಧಿತರಾದ ಇತರ ಇಬ್ಬರನ್ನು ಆರೋಪಿ ಬಾಲಕನ ಸಹೋದರ ಪುಟ್ಟಮಾದ (19) ಮತ್ತು ಚಿಕ್ಕಪ್ಪ ಹರೀಶ್ (40) ಎಂದು ಗುರುತಿಸಲಾಗಿದೆ.
ಈ ಅಪ್ರಾಪ್ತ ವಯಸ್ಕ ಜೋಡಿ ಹುಡುಗನ ಪೋಷಕರ ಮನೆಯ ಪಕ್ಕದ ಕೋಣೆಯಲ್ಲಿ ಒಂದು ತಿಂಗಳಿಂದ ವಾಸವಿತ್ತು. ಜುಲೈ 10 ರಂದು ಹುಡುಗಿ ಇನ್ಸ್ಟಾಗ್ರಾಂನಲ್ಲಿ ಮತ್ತೊಬ್ಬ ಹುಡುಗನ ಜೊತೆ ಚಾಟ್ ಮಾಡುವುದನ್ನು ಹುಡುಗ ಗಮನಿಸಿದ್ದಾನೆ. ಕೋಪಗೊಂಡು ಆಕೆಯೊಂದಿಗೆ ಜಗಳವಾಡಿ ಹಲ್ಲೆ ಮಾಡಿ ನಾಡ ಬಂದೂಕಿನಿಂದ ಗುಂಡಿಕ್ಕಿದ್ದಾನೆ. ಆಕೆ ಸ್ಥಳದಲ್ಲೇ ಅಸು ನೀಗಿದ್ದಾಳೆ. ಮೃತಪಟ್ಟಿದ್ದಾಳೆ. ಆರೋಪಿ ಹಿರಿಯ ಸಹೋದರ ಹಾಗೂ ಚಿಕ್ಕಪ್ಪನಿಗೆ ಕರೆ ಮಾಡಿದ್ದಾನೆ. ಅಪರಾಧವನ್ನು ಮುಚ್ಚಿಹಾಕಲೆಂದು ಅವರೆಲ್ಲ ಸೇರಿ ಮೃತದೇಹವನ್ನು ಜಮೀನಿನಲ್ಲಿ ಹೂತುಹಾಕಿದ್ದಾರೆ.
ಬಂದೂಕು ಆರೋಪಿಯ ಅಜ್ಜನಿಗೆ ಸೇರಿದ್ದಾಗಿದ್ದು, ಬೇಟೆಗಾಗಿ ಬಳಸಲಾಗುತ್ತಿತ್ತು ಎನ್ನಲಾಗಿದೆ. ಹರೀಶ್ ಸ್ನೇಹಿತನೊಬ್ಬನೊಂದಿಗೆ ಕೊಲೆಗೆ ಸಂಬಂಧಿಸಿದ ವಿವರ ಹಂಚಿ ಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ಬಾಲಕಿಯ ಪೋಷಕರಿಗೆ ತಲುಪಿದ್ದು, ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಅವರು ದೂರು ದಾಖಲಿಸಿದ್ದಾರೆ. ಸ್ನೇಹಿತೆಯೊಬ್ಬಳ ಮನೆಯಲ್ಲಿ ಉಳಿದುಕೊಂಡಿರುವುದಾಗಿ ಆಕೆ ಪೋಷಕರಿಗೆ ತಿಳಿಸಿದ್ದಳು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಮತ್ತು ಶೀಘ್ರ ಮನೆಗೆ ಮರಳುವುದಾಗಿ ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.


