ಕೊಡಚಾದ್ರಿ ಪ್ರವಾಸಕ್ಕೆಂದು ಹೋಗಿದ್ದ ಯಲಹಂಕದ ಶ್ರೀಕಾಂತ್ ಎಂಬ 28 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕೊಡಚಾದ್ರಿ ಶಿಖರ ವೀಕ್ಷಿಸಲೆಂದು ಸ್ನೇಹಿತರೊಂದಿಗೆ ಬಂದಿದ್ದ ಶ್ರೀಕಾಂತ್ ಶುಕ್ರವಾರ ರಾತ್ರಿ ಸಂಪೆಕಟ್ಟೆ ಪ್ರದೇಶದಲ್ಲಿ ಕಟ್ಟಿನಹೊಳೆ ಸಮೀಪ ಸ್ನೇಹಿತರ ಮನೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಸ್ನೇಹಿತರ ಮನೆಯಲ್ಲಿ ರಾತ್ರಿ ತಂಗಿದ್ದ ತಂಡ ಬೆಳಗ್ಗೆ ಕೊಡಚಾದ್ರಿ ಶಿಖರ ತಲುವ ಪ್ಲಾನ್ ಮಾಡಿಕೊಂಡಿತ್ತು. ಮನೆಯಲ್ಲಿ ಕುಸಿದು ಬಿದ್ದ ಶ್ರೀಕಾಂತ್ ಅವರನ್ನು ಸ್ನೇಹಿತರು ತಕ್ಷಣ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತದಲ್ಲಿ ನವ ವಿವಾಹಿತೆ ಸಾವು
ಮೈಸೂರಿನ ಆರ್.ಟಿ.ನಗರ ಸಮೀಪ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ನವ ವಿವಾಹಿತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೈಸೂರು ತಾಲೂಕಿನ ಮಾಕನಹುಂಡಿ ಗ್ರಾಮದ ಮೇಘನಾ (20) ಮೃತಪಟ್ಟ ಯುವತಿ. ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಮೇಘನಾ ಗಂಭೀರ ಗಾಯಗೊಂಡಿದ್ದರು.
15 ದಿನಗಳ ಹಿಂದೆ ಬಿದರಗೂಡು ಗ್ರಾಮದ ಪುನೀತ್ ಅವರೊಂದಿಗೆ ಮೇಘನಾ ಅವರ ಮದುವೆ ಆಗಿತ್ತು. ಹೆಲ್ಮೆಟ್ ಧರಿಸದಿದ್ದ ಕಾರಣ ಮೇಘನಾ ಗಂಭೀರವಾಗಿ ಗಾಯಗೊಂಡು ಅಸು ನೀಗಿದ್ದಾರೆ. ಅಪಘಾತದಲ್ಲಿ ಪುನೀತ್ ಅವರ ತಲೆ, ಕೈ ಹಾಗೂ ಕಾಲಿಗೆ ಗಾಯವಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.


