ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಿ.ವೀರಣ್ಣ (86) ಕೊರಟಗೆರೆಯ ತಮ್ಮ ತೋಟದ ಮನೆಯಲ್ಲಿ ನಿಧನರಾಗಿದ್ದಾರೆ.
ವಕೀಲರಾಗಿದ್ದ ವೀರಣ್ಣ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದು, ಸಚಿವರಾಗಿ, ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ರಾಜಕೀಯದಲ್ಲಿ ದೀರ್ಘಕಾಲ ಸಕ್ರಿಯರಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ.
1983ರಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ವೀರಣ್ಣ 1984ರಿಂದ 1989ರವರೆಗೆ ಸಚಿವರಾಗಿದ್ದರು. ರಾಮಕೃಷ್ಣ ಹೆಗಡೆ ಮತ್ತು ಬೊಮ್ಮಯಿ ಕಾಲದಲ್ಲಿ ಸಾರಿಗೆ, ಸಣ್ಣ ಉಳಿತಾಯ, ಕೈಗಾರಿಕೆ, ವಾಣಿಜ್ಯ, ಬಂಧಿಖಾನೆ ಸೇರಿ ಹನ್ನೊಂದು ಇಲಾಖೆ ನಿರ್ವಹಿಸಿದ್ದರು. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ವಾಲ್ಮೀಕಿ ಸಮುದಾಯವನ್ನು ಸೇರಿಸಲು ಪ್ರಮುಖ ಪಾತ್ರ ವಹಿಸಿದ್ದರು.
ಸಿಎಂ ದಿಕೆ ಶಿವಕುಮಾರ್ ಸಂತಾಪ
ಮಾಜಿ ಸಚಿವರು, ಮಾಜಿ ಉಪಸಭಾಪತಿಗಳೂ ಆಗಿದ್ದ ಸಿ. ವೀರಣ್ಣ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಸಚಿವರಾಗಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾಗಿ ನಾಡಿಗೆ ಅವರು ನೀಡಿದ ಸೇವೆ ಅಪಾರ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಮರಿಸಿದ್ದಾರೆ.
ರಾಜ್ಯದ ಹಿತ ಮತ್ತು ಶೋಷಿತ ಸಮುದಾಯಗಳ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದ ಅವರು, ತಮ್ಮ ಹೋರಾಟದ ಬದುಕು ಹಾಗೂ ತಳಸಮುದಾಯಗಳ ಬಗೆಗಿನ ಕಾಳಜಿಯ ಮೂಲಕ ಸದಾ ನಮ್ಮ ನೆನಪಿನಲ್ಲಿ ಉಳಿಯಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಂತಾಪ ಸಲ್ಲಿಸಿದ್ದಾರೆ.


