ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ನಡೆದಿದ್ದ ವೃದ್ಧ ದಂಪತಿಯ ನಿಗೂಢ ಸಾವು ಪ್ರಕರಣದಲ್ಲಿ ಪತ್ನಿಯನ್ನು ಕೊಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಿದ್ದು, ನಿಜಾಂಶ ಬಯಲಾಗಿದೆ.
ಪತ್ನಿ ಸುಮಿತ್ರಾ ಪ್ರಸಾದ್(77) ಹೃದಯಾಘಾತದಿಂದ ಮೃತಪಟ್ಟಿದ್ದು, ಆಕೆಯ ಸಾವಿನಿಂದ ನೊಂದ ಪತಿ ಶಿವಾನಂದಂ ಪ್ರಸಾದ್(83) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಸಂಪಿಗೆಹಳ್ಳಿಯ ನಿವಾಸದಲ್ಲಿ ಸುಮಿತ್ರಾ ಪ್ರಸಾದ್ ಹಾಗೂ ಶಿವಾನಂದಂ ಪ್ರಸಾದ್ ಶವಗಳು ಪತ್ತೆಯಾಗಿದ್ದವು. ಪುತ್ರ, ತಂದೆಯೇ ತಾಯಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಸುಮಿತ್ರಾ ಪ್ರಸಾದ್ ಅವರ ದೇಹದ ಮೇಲೆ ಯಾವುದೇ ಹಲ್ಲೆಯ ಕುರುಹುಗಳಿರಲಿಲ್ಲ. ಅವರಿಗೆ ತೀವ್ರ ಹೃದಯಾಘಾತ ಆಗಿದೆ, ಆಕೆ ಮೃತಪಟ್ಟ ದೀರ್ಘ ಸಮಯದ ಬಳಿಕ ಪತಿ ಶಿವಾನಂದಂ ಪ್ರಸಾದ್ ಸಾವು ಆಗಿದೆ. ಸುಮಿತ್ರಾ ಪ್ರಸಾದ್ ಅವರು ಅಂಧ ಹಾಗೂ ಕಿವುಡರಾಗಿದ್ದರು. ಶಿವಾನಂದಂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಪತ್ನಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದರಿಂದ ಪತಿ ಆಘಾತಕ್ಕೊಳಗಾಗಿದ್ದಾರೆ.
ಬಿಹಾರ ಮೂಲದ ಈ ವೃದ್ಧ ದಂಪತಿ ನಗರದ ಚೊಕ್ಕನಾಯಕನಹಳ್ಳಿಯ ಅಪಾರ್ಟ್ಮೆಂಟ್ದರಲ್ಲಿ ವಾಸವಾಗಿದ್ದರು. ದಂಪತಿ ಪುತ್ರ ಕಿರಣ್ ಕುಮಾರ್ ಕಶ್ಯಪ್ ಏರ್ಪೋರ್ಸ್ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ, ಮಕ್ಕಳು ಹಾಗೂ ತಂದೆ ತಾಯಿಯೊಂದಿಗೆ ವಾಸವಾಗಿದ್ದರು.


