Menu

175 ತಾಲೂಕುಗಳಲ್ಲಿ ಬರಗಾಲ ಘೋಷಿಸಿ ಹಣ ಬಿಡುಗಡೆ ಮಾಡಿ: ಸರ್ಕಾರಕ್ಕೆ ಆರ್‌ ಅಶೋಕ ಆಗ್ರಹ

ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಣೆ ಮಾಡಿದೆ. ಆದರೆ 175 ತಾಲೂಕುಗಳಲ್ಲಿ ಬರ ಘೋಷಿಸಿ, ಹಣ ಬಿಡುಗಡೆ ಬಗ್ಗೆ ಸರಿಯಾಗಿ ತಿಳಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಳ್ಳೆ ಹೊಡೆದ ಮೇಲೆ ಕೋಟೆಯ ಬಾಗಿಲು ಹಾಕಿದಂತೆ ರಾಜ್ಯ ಸರ್ಕಾರ ನಾಲ್ಕು ತಿಂಗಳ ಬರಗಾಲ ಘೋಷಣೆ ಮಾಡಿದೆ. ಆರಂಭದಲ್ಲೇ ಬರ ಘೋಷಣೆ ಮಾಡಿ ಎಂದು ನಾನು ಪತ್ರ ಬರೆದಿದ್ದೆ. 89 ತಾಲೂಕುಗಳಲ್ಲಿ ತೀವ್ರ ಹಾಗೂ 12 ತಾಲೂಕುಗಳಲ್ಲಿ ಕಡಿಮೆ ಬರ ಎಂದು ಘೋಷಣೆ ಮಾಡಲಾಗಿದೆ. ಮಂಡ್ಯ, ಮೈಸೂರು ಮೊದಲಾದ ಭಾಗಗಳಲ್ಲಿ ನಾನು ಪ್ರವಾಸ ಮಾಡಿದ್ದೆ. ಬಿಜೆಪಿ ಶಾಸಕರು  ಅಧ್ಯಯನ ಮಾಡಿದ್ದರು. 175 ತಾಲೂಕುಗಳಲ್ಲಿ ಬರ ಘೋಷಣೆ ಮಾಡಬೇಕಿತ್ತು. ಹಣದ ಕೊರತೆಯಿಂದಾಗಿ ತಾಲೂಕುಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಒಂದು ತಾಲೂಕಿಗೆ ಒಂದು ಕೋಟಿ ರೂ.ನೀಡಲಾಗಿದೆ. ಎಕರೆಗೆ 50,000 ರೂ. ನೀಡಬೇಕೆಂದು ಆಗ್ರಹ ಮಾಡಿದ್ದರೂ ಅದನ್ನು ಪರಿಗಣಿಸಿಲ್ಲ. ಮೇವು ಎಷ್ಟು ಸಂಗ್ರಹ ಇದೆ, ಕುಡಿಯುವ ನೀರು, ಬೋರ್‌ವೆಲ್‌ಗೆ ಏನು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ರೈತರು ಪ್ರತಿಭಟಿಸುತ್ತಿರುವುದರಿಂದ ಕಾಟಾಚಾರಕ್ಕೆ ಬರ ಘೋಷಿಸಲಾಗಿದೆ ಎಂದರು.

ಕಂದಾಯ ಸಚಿವರು ಕೇವಲ ಘೋಷಣೆ ಮಾಡುವುದಲ್ಲ. ಯಾವ ಕ್ರಮ ವಹಿಸಲಾಗಿದೆ, ಎಷ್ಟು ಹಣ ನೀಡಲಾಗಿದೆ ಎಂದು ನಿಖರವಾಗಿ ಹೇಳಬೇಕು. ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣ ನೀಡುತ್ತದೆ. ಆ ಹಣ ಎಷ್ಟಿದೆ ಎಂದು ತಿಳಿಸಬೇಕು. ತಮಿಳುನಾಡಿನ ಮುಖ್ಯಮಂತ್ರಿ ಬೆಳೆ ಬೆಳೆಯಿರಿ ಎಂದು ರೈತರಿಗೆ ಕರೆ ನೀಡಿದರೆ, ನಮ್ಮ ಮುಖ್ಯಮಂತ್ರಿ ಬೆಳೆ ಬೆಳೆಯಬೇಡಿ ಎಂಬ ಸಂದೇಶ ನೀಡುತ್ತಾರೆ. ಕಲಬುರ್ಗಿ ಮೊದಲಾದ ಭಾಗಗಳಲ್ಲಿ ಜನರು ವಲಸೆ ಹೋಗಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸವೂ ಅರ್ಧಕ್ಕೆ ಸ್ಥಗಿತಗೊಂಡಿದೆ. ಮಂಡ್ಯಕ್ಕೆ ವಲಸೆ ಬಂದ ಹೆಣ್ಣುಮಗಳೊಬ್ಬರ ಅತ್ಯಾಚಾರವಾಗಿದೆ. ವಲಸೆ ಹೋಗುವವರಿಗೆ ಸರಿಯಾದ ರಕ್ಷಣೆ ಇಲ್ಲ. ಇದರ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗಿದೆ, ಆ ಮಕ್ಕಳ ಶಿಕ್ಷಣಕ್ಕೆ ಯಾವ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಬೇಕಿತ್ತು. ಕಂದಾಯ ಸಚಿವರು ಈ ಬಗ್ಗೆ ಪ್ರಕಟಣೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿಕೆಶಿವಕುಮಾರ್‌ ಸಾಲ ಮನ್ನಾ ಬಗ್ಗೆ ಹೇಳಿ ಎರಡು ತಿಂಗಳು ಕಳೆದಿದೆ. ಪ್ರತಿ ರೈತರಿಗೆ ಕನಿಷ್ಠ 1 ಲಕ್ಷ ರೂ. ಸಾಲ ಮನ್ನಾ ಮಾಡಬೇಕು. ವಿಬಿ ಜಿ ರಾಮ್‌ಜೀ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ ವಲಸೆ ತಪ್ಪಿಸಬಹುದು. ಆ ಬಗ್ಗೆಯೂ ಕ್ರಮ ವಹಿಸಬೇಕು. ಎಲ್‌ನಿನೊ ಬರುತ್ತದೆ ಎಂಬ ಮುನ್ನೆಚ್ಚರಿಕೆ ಇದ್ದರೂ ಕ್ರಮ ವಹಿಸಿಲ್ಲ. ನಾವು ಅಧ್ಯಯನ ಮಾಡಿದ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಮಾಡಿದ ಸಚಿವ ಬಿ.ನಾಗೇಂದ್ರ ವಿರುದ್ಧ ಸದನದಲ್ಲಿ ನಿರಂತರ ಹೋರಾಟ ಮಾಡಿದ್ದೇವೆ. ಆದ್ದರಿಂದ ಅವರು ರಾಜೀನಾಮೆ ನೀಡುವುದು ಖಚಿತ. ಸಿಬಿಐ ಹಾಗೂ ಇಡಿ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ದಲಿತರ ಹಣ ಲೂಟಿ ಮಾಡಿದಾಗ ಇವರಿಗೆ ತಾವು ದಲಿತರು ಎಂದು ಗೊತ್ತಿರಲಿಲ್ಲ. ಈಗ ಮಾತ್ರ ಜಾತಿಯ ರಕ್ಷಣೆ ಪಡೆಯುತ್ತಿದ್ದಾರೆ. ಹಗರಣ ನಡೆದಿಲ್ಲವೆಂದಾದರೆ ಚಂದ್ರಶೇಖರ್‌ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು,  ಅವರನ್ನು ಮರಳಿ ಸಚಿವ ಸಂಪುಟಕ್ಕೆ ಸೇರಿಸಿದ್ದು ಏಕೆಂದು ಕಾರಣ ನೀಡಬೇಕು ಎಂದು ಒತ್ತಾಯಿಸಿದರು.

ಹಗರಣದ ಮೂಲ ಸೂತ್ರಧಾರರು ಹೈಕಮಾಂಡ್‌ ಎಂಬುದು ಬಯಲಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ದಲಿತರ ಹಣ ನುಂಗಿದವರು ಸಂಪುಟದಲ್ಲಿ ಇರಬಾರದು ಎಂಬ ಸಂದೇಶವನ್ನು ನಾವು ನೀಡಿದ್ದೇವೆ. ನಮ್ಮ ಹೋರಾಟಕ್ಕೆ ಖಂಡಿತ ಬೆಲೆ ಸಿಗಲಿದ್ದು, ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ. ಒಂದು ವಾರದಲ್ಲಿ ತೀರ್ಮಾನವಾಗದೇ ಇದ್ದರೆ ಸಿಎಂ ಮನೆಗೂ ಮುತ್ತಿಗೆ ಹಾಕುತ್ತೇವೆ ಎಂದರು.

ಬಿಡದಿ ಟೌನ್‌ಶಿಪ್‌, ನೈಸ್‌ ಮೊದಲಾದ ವಿಷಯಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಮುಂದಿನ ಸದನದಲ್ಲಿ ಈ ಬಗ್ಗೆ ಮಾತಾಡುತ್ತೇವೆ. ನಾನು ವಿರೋಧ ಪಕ್ಷದ ನಾಯಕನಾಗಿದ್ದರೂ ಪತ್ರ ಬರೆದರೂ ಮನೆ ನೀಡಿಲ್ಲ. ಕಾಂಗ್ರೆಸ್‌ ನಾಯಕರ ಅಗತ್ಯ ನನಗಿಲ್ಲ. ನನ್ನ ಗುರುಗಳು ಅಟಲ್‌ ಬಿಹಾರಿ ವಾಜಪೇಯಿ ಹಾಗೂ ನನ್ನ ಪಕ್ಷ ಬಿಜೆಪಿ ಮಾತ್ರ ಎಂದು ಹೇಳಿದರು.

ಅನೇಕ ಕ್ಲಬ್‌ಗಳು ಇನ್ನೂ ನೋಂದಣಿಯಾಗಿಲ್ಲ. ಗಣೇಶ ಸಂಘಗಳು, ಕ್ರೈಸ್ತ ಸಂಘಗಳು ಯಾವುದಕ್ಕೂ ನೋಂದಣಿ ಬೇಕಿಲ್ಲ. ಆದರೆ ಖರ್ಗೆ ಸಂವಿಧಾನದಲ್ಲಿ ಮಾತ್ರ ಆರ್‌ಎಸ್‌ಎಸ್‌ ನೋಂದಣಿಯಾಗಬೇಕು ಎಂದು ಹೇಳುತ್ತಾರೆ. ಆದರೆ ನಾವು ಬಾಬಾ ಸಾಹೇಬ್‌ ಅಂಬೇಡ್ಕರ್‌ರ ಸಂವಿಧಾನ ಪಾಲಿಸುತ್ತೇವೆ. ಕಸದಿಂದ ಸ್ವಾತಂತ್ರ್ಯ ಎಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ. ಈಗ ಪಾದಾಚಾರಿ ಮಾರ್ಗಗಳಲ್ಲೇ ಅಂಗಡಿಗಳಿವೆ. ಎಲ್ಲ ರಸ್ತೆಗಳ ಬದಿಗಳಲ್ಲಿ ಹಳೆ ಕಾರುಗಳಿವೆ. ಸಮಿತಿಗಳನ್ನು ರಚಿಸುವುದರಿಂದ ಏನೂ ಉದ್ಧಾರವಾಗಲ್ಲ. ಅನುದಾನ, ಅನುಷ್ಠಾನ ಮಾಡುವ ಅಧಿಕಾರಿಗಳು ಹಾಗೂ ಯೋಜನೆ ರೂಪಿಸುವ ಇಲಾಖೆ ಬೇಕು. ಅದ್ಯಾವುದೂ ಸರ್ಕಾರದಲ್ಲಿ ಇಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಇದ್ದರೂ ಅದನ್ನು ಜಾರಿ ಮಾಡಿಲ್ಲ ಎಂದರು.

Related Posts

Leave a Reply

Your email address will not be published. Required fields are marked *