Menu

ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅಧಿಕಾರಕ್ಕಿಂತ ಸಂಘಟನೆಗೆ ಆದ್ಯತೆ ನೀಡಿದ್ದ ಎಐಸಿಸಿ ಕಾರ್ಯದರ್ಶಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರಿಗೆ ಸರಕಾರಿ ಗೌರವಗಳೊಂದಿಗೆ ಭಾವಪೂರ್ಣ ಅಂತಿಮ ವಿದಾಯ ಸಲ್ಲಿಸಲಾಯಿತು.

ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂರಜ್ ಹೆಗ್ಡೆ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಮಾಜಿ ಸಿಎಂ, ಸಿಡಬ್ಲ್ಯೂಸಿ ಸದಸ್ಯರಾದ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಬಿಇಎಲ್ ರಸ್ತೆ ನಿವಾಸದಲ್ಲಿ ಅಂತಿಮ ನಮನ ಸಲ್ಲಿಸಿದರು.

ರಾಹುಲ್ ಗಾಂಧಿ ಅವರು ಸೂರಜ್ ಹೆಗಡೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದರು. ಸೂರಜ್ ಹೆಗ್ಡೆ ಅವರ ಪತ್ನಿ ಶಿಲ್ಪಾ, ಪುತ್ರರಾದ ಸಮೃಧ್, ವಿಶೃತ್ ಹಾಗೂ ಕುಟುಂಬ ಸದಸ್ಯರಿಗೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಂತ್ವನ ಹೇಳಿ, ಧೈರ್ಯ ತುಂಬಿದರು. ನಂತರ ಸೂರಜ್ ಹೆಗ್ಡೆ ಅವರ ನಿವಾಸದ ಬಳಿಯೇ ಸಕಲ ಸರ್ಕಾರಿ ಗೌರವವನ್ನು ಅರ್ಪಿಸಲಾಯಿತು.

ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಪೊಲೀಸ್ ಬಂದೂಕು ಪಡೆ ಗೌರವ ಸಲ್ಲಿಸಿತು. ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂರಜ್ ಅವರ ಪತ್ನಿ ಶಿಲ್ಪಾ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಉಮ್ಮಳಿಸಿ ಬಂದ ದುಃಖ ತಾಳಲಾರದೇ ಬಿಕ್ಕಿ, ಬಿಕ್ಕಿ ಅಳುತ್ತಿದ್ದ ಅವರಿಗೆ ಸಾಂತ್ವನ ಹೇಳಿದರು. ಧ್ವಜ ಹಸ್ತಾಂತರದ ವೇಳೆ ಭಾವುಕರಾದ ಡಿಕೆ.ಶಿವಕುಮಾರ್ ಅವರು ಇಡೀ ಪಕ್ಷ ನಿಮ್ಮ ದುಃಖದಲ್ಲಿ ಭಾಗಿಯಾಗಿದೆ, ನಿಮ್ಮ ಕುಟುಂಬದ ಜತೆ ನಾವಿದ್ದೇವೆ ಎಂದು ಸಂತೈಸಿದರು.

ಇದಕ್ಕೂ ಮೊದಲು ಸಿಎಂ ಡಿಕೆ ಶಿವಕುಮಾರ್ ಅವರು ಅಂತಿಮ ಗೌರವ ಸಲ್ಲಿಸಲು ಆಗಮಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆ ಬರಮಾಡಿಕೊಂಡರು. ಅಂತಿಮ ನಮನದ ನಂತರ ವಿಮಾನ ನಿಲ್ದಾಣಕ್ಕೆ ಮತ್ತೆ ತೆರಳಿ ಬೀಳ್ಕೊಟ್ಟರು.

Related Posts

Leave a Reply

Your email address will not be published. Required fields are marked *