ಮಂಗಳೂರಿನ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿ ಅಶ್ಲೀಲ ವೀಡಿಯೊ ಮುಂದಿಟ್ಟು ಬ್ಲ್ಯಾಕ್ಮೇಲ್ ಮಾಡಿ 2 ಕೋಟಿ 77 ಲಕ್ಷ ರೂಪಾಯಿ ದೋಚಿರುವ ಪ್ರಕರಣ ಸಂಬಂಧ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಜಿತೇಶ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2024ರಲ್ಲಿ ಉದ್ಯಮಿಯನ್ನು ಜಿತೇಶ್ ಹನಿಟ್ರ್ಯಾಪ್ ಮಾಡಿದ್ದು, ಅಶ್ಲೀಲ ಫೋಟೋ, ವೀಡಿಯೊ ಇಟ್ಟುಕೊಂಡು ನಿನ್ನ ಪತ್ನಿಗೆ ತೋರಿಸುವುದಾಗಿ ಬೆದರಿಸುತ್ತ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಉದ್ಯಮಿ ಚೆಕ್ ಮೂಲಕ ಜಿತೇಶ್ಗೆ ಹಣ ನೀಡಿದ್ದ. ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಸಂತ್ರಸ್ತ ಉದ್ಯಮಿ, ಯುವ ಕಾಂಗ್ರೆಸ್ ಮುಖಂಡ ನಿಝಾಮ್ಗೆ ಮಾಹಿತಿ ನೀಡಿದ್ದ. ಜಿತೇಶ್ ಜೊತೆ ಸೇರಿ ಕಾಂಗ್ರೆಸ್ ಮುಖಂಡ ನಿಝಾಮ್ ಕೂಡ
ಉದ್ಯಮಿಯನ್ನು ಬ್ಲ್ಯಾಕ್ಮೇಲ್ ಮಾಡಿ ಹಣ ಕಿತ್ತುಕೊಳ್ಳಲು ಆರಂಭಿಸಿ ಇಬ್ಬರು ಲೂಟಿ ಮಾಡಿದ್ದಾರೆ.
ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ನೋಟಲ್ಲಿ ಉದ್ಯಮಿಯ ಹೆಸರು ಬರೆದಿಟ್ಟಿದ್ದಾಗಿ ನಿಝಾಮ್ ಸುಳ್ಳು ಹೇಳಿ ಉದ್ಯಮಿ ಬಳಿ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದಾನೆ. ಹನಿಟ್ರ್ಯಾಪ್ ಕೇಸ್ನಲ್ಲಿ ನಿಝಾಮ್ ಮತ್ತು ಜಿತೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
2024ರ ಮೇ ತಿಂಗಳಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಿಝಾಮ್ ಹೇಳಿದ್ದ. ಡೆತ್ನೋಟ್ನಲ್ಲಿ ಉದ್ಯಮಿ ಹೆಸರು ಬರೆದಿರೋದಾಗಿ ಕಥೆ ಸೃಷ್ಟಿಸಿ ಮತ್ತೆ ಬ್ಲ್ಯಾಕ್ಮೇಲ್ ಮಾಡಿದ್ದ. ಜಿತೇಶ್ ನೇಣಿಗೆ ಶರಣಾದ ರೀತಿ ಹಾಗೂ ಅಂತ್ಯಕ್ರಿಯೆಯ ಪೋಟೊ ತೋರಿಸಿದ್ದಲ್ಲದೆ ಕೇಸು ಹಾಕಿಸಿ ಜೈಲಿಗೆ ಕಳಿಸುವುದಾಗಿ ಹೆದರಿಸಿದ್ದ. ಜೈಲಿಗೆ ಹೋಗುವುದನ್ನು ತಪ್ಪಿಸಲು ಹಣದ ಬೇಡಿಕೆ ಇಟ್ಟಿದ್ದ. 2024 ರಿಂದ 2026ರವರೆಗೆ 2 ಕೋಟಿ 77 ಲಕ್ಷಹಣ ದರೋಡೆ ಮಾಡಿದ್ದ.
2026ರ ಜೂನ್ನಲ್ಲಿ ಉದ್ಯಮಿಗೆ ಮಂಗಳೂರಿನಲ್ಲಿ ಜಿತೇಶ್ ಕಾಣಿಸಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ಜೀವಂತ ಇರುವುದನ್ನು ನೋಡಿ, ಉದ್ಯಮಿ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಆದೇಶ ಹೊರಡಿಸಿದ್ದಾರೆ.


