ನೀಟ್ ಅಕ್ರಮವನ್ನು ವಿರೋಧಿಸಿ ನ್ಯಾಯಕ್ಕಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ಗೂಂಡಾಗಳನ್ನು ಬಿಟ್ಟು ಕಲ್ಲು ತೂರಾಟ ನಡೆಸುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
ಜಂತರ್ ಮಂತರ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲ್ಲು ತೂರಾಟ ನಮ್ಮ ಕಡೆಯಿಂದ ನಡೆದಿಲ್ಲ. ಪೊಲೀಸರು ಕಲ್ಲುಗಳನ್ನು ತುಂಬಿರುವ ಟ್ರಕ್ಗಳನ್ನು ತರುತ್ತಿದ್ದಾರೆ. ಬಿಜೆಪಿಯ ಗೂಂಡಾಗಳು ಬಂದು ಕಲ್ಲು ತೂರಾಟ ನಡೆಸಿ ಸಿಜೆಪಿ ಕಾರ್ಯಕರ್ತರ ಹೆಸರನ್ನು ಕೆಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಕಲೆದ ಒಂದು ತಿಂಗಳಿಂದ ನಾವು ಶಾಂತಿಯುತ ಧರಣಿ ನಡೆಸುತ್ತಿದ್ದೇವೆ. ಒಂದು ತಿಂಗಳಲ್ಲಿ ಅಹಿತಕರ ಘಟನೆ ನಡೆದಿಲ್ಲ. ಈಗ ಈ ಹೋರಾಟ ಬೃಹತ್ ರೂಪ ಪಡೆದುಕೊಳ್ಳುತ್ತಿದ್ದಂತೆ ಜನರನ್ನು ಪ್ರಚೋದಿಸಲು ಬಿಜೆಪಿಯವರು ಹೊರಗಿನಿಂದ ಗೂಂಡಾಗಳನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರೊಂದಿಗಿನ ಮಾತುಕತೆಯ ಕುರಿತು ಉಲ್ಲೇಖಿಸಿದ ಅವರು, ಜೆ.ಪಿ. ನಡ್ಡಾ ಅವರೊಂದಿಗೆ ಕಳೆದ ಸಭೆಯ ನಂತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. 34ನೇ ದಿನಕ್ಕೆ ನಮ್ಮ ಪ್ರತಿಭಟನೆ ಕಾಲಿಟ್ಟಿದೆ, ಸರ್ಕಾರದೊಂದಿಗೆ ಇನ್ಮುಂದೆ ಮಾತುಕತೆ ನಡೆದರೂ ಅದು ಕೇವಲ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲೇ ನಡೆಯಬೇಕು ಎಂದು ತಿಳಿಸಿದರು.
ಸೋನಮ್ ಅವರ ಉಪವಾಸ ಸತ್ಯಾಗ್ರಹ ಮುಂದುವರಿದಿದ್ದು, 26ನೇ ದಿನ ತಲುಪಿದೆ. ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಆದರೆ ಸೋನಮ್ ಜೀವ ನಮಗೆ ಅತ್ಯಂತ ಅಮೂಲ್ಯ. ಅವರು ಉಪವಾಸ ನಿಲ್ಲಿಸಬೇಕೆಂದು ದೀಪ್ಕೆ ಮನವಿ ಮಾಡಿದ್ದಾರೆ.
ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಪ್ರತಿಭಟನಾಕಾರರು ಸಂಸದ್ ಚಲೊ ಕರೆ ನೀಡಿ ಬ್ಯಾರಿಕೇಡ್ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ಘರ್ಷಣೆಯಲ್ಲಿ ಇಬ್ಬರು ಎಸಿಪಿ ದರ್ಜೆಯ ಅಧಿಕಾರಿಗಳು ಸೇರಿದಂತೆ ಕನಿಷ್ಠ ಆರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೇಂದ್ರ ದೆಹಲಿ ಹಾಗೂ ಜಂತರ್ ಮಂತರ್ ಸುತ್ತಮುತ್ತ ಜ್ಯಾಮರ್ ಅಳವಡಿಸಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.


