ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಲಬುರಗಿ ಜಿಲ್ಲಾ ಬ್ರಾಹ್ಮಣ ಸಂಘ, ವಿಶ್ವ ಮಧ್ವ ಮಹಾ ಪರಿಷತ್ ಮನವಿ ಸಲ್ಲಿಸಿದೆ.
ಭಾರತೀಯ ಸನಾತನ ಧರ್ಮ, ತತ್ತ್ವಶಾಸ್ತ್ರ, ಆಧ್ಯಾತ್ಮಿಕತೆ ಹಾಗೂ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಅಪಾರ ಕೊಡುಗೆ ನೀಡಿರುವ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಜಿಲ್ಲಾ ಬ್ರಾಹ್ಮಣ ಸಂಘ, ವಿಶ್ವ ಮಧ್ವ ಮಹಾ ಪರಿಷತ್, ಸತ್ಯಾತ್ಮ ಸೇನೆ ಪ್ರಮುಖರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಶ್ರೀ ಮಧ್ವಾಚಾರ್ಯರ ತತ್ತ್ವ, ವಿಚಾರಧಾರೆ ಮತ್ತು ಆದರ್ಶಗಳನ್ನು ಮಧ್ವ ಪರಂಪರೆಯ ಆಚಾರ್ಯರು, ಮಠಾಧೀಶರು ಹಾಗೂ ಭಕ್ತರು ಇಂದಿಗೂ ನಿರಂತರವಾಗಿ ಸಮಾಜದಲ್ಲಿ ಪ್ರಚಾರಪಡಿಸುತ್ತಿದ್ದಾರೆ. ಅವರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರೀಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅವರ ಪರಂಪರೆಯು ಧಾರ್ಮಿಕ ಜ್ಞಾನ, ನೈತಿಕ ಮೌಲ್ಯಗಳು, ಆಧ್ಯಾತ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಪ್ರತಿವರ್ಷ ವಿಜಯದಶಮಿ ದಿನ ಬರುವ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವಂತೆ ಸಚಿವರಿಗೆ ಮುಖಂಡರು ಆಗ್ರಹಿಸಿದ್ದಾರೆ.
ಜಯಂತಿಯ ಅಂಗವಾಗಿ ಸರ್ಕಾರದ ವತಿಯಿಂದ ಅಧಿಕೃತ ಕಾರ್ಯಕ್ರಮ ಆಯೋಜಿಸಿ, ಶ್ರೀ ಮಧ್ವಾಚಾರ್ಯರ ಜೀವನ, ತತ್ತ್ವಶಾಸ್ತ್ರ ಹಾಗೂ ಕೊಡುಗೆಗಳ ಕುರಿತು ವಿಚಾರ ಸಂಕಿರಣ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ, ಅವರ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಂಬಂಧಿಸಿದ ಇಲಾಖೆಗೆ ಅಗತ್ಯ ನಿರ್ದೇಶನ ನೀಡಿ ಕರ್ನಾಟಕ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಅಲ್ಲಂಪ್ರಭು ಪಾಟೀಲ್ ಉಪಸ್ಥಿತರಿದ್ದರು. ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಸಂಸ್ಕೃತ ವಿದ್ವಾಂಸರಾದ ನವಲಿ ಗುರುಮಧ್ವಾಚಾರ್ಯರು, ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ದೇಶಮುಖ, ಚಂದ್ರಕಾಂತ ದೇಶ ಮುಖ, ಡಿಕೆ ಕುಲಕರ್ಣಿ, ಆನಂದ ತೀರ್ಥ ಜೋಶಿ, ಲಕ್ಷ್ಮಣಾಚಾರ್ಯ ಗಂಗಾವತಿ, ವಿನುತ ಕುಲಕರ್ಣಿ, ಭರತ ಕುಲಕರ್ಣಿ ಚಿತ್ತಾಪುರ, ರಘುತ್ತಮ್ ಘಂಟಿ, ಜಯತೀರ್ಥ ಜೋಶಿ, ಅಮಿತ ಕುಲಕರ್ಣಿ, ನಾರಾಯಣ ಪೂಜಾರ್, ಪ್ರಶಾಂತ್ ಕೊರಳ್ಳಿ, ಶ್ರೀನಿವಾಸ್ ದೇಸಾಯಿ ಉಪಸ್ಥಿತರಿದ್ದರು.


