ದೇಶದ ನೂರಾರು ಖಾಸಗಿ ಐಟಿ ಕಂಪನಿಗಳಲ್ಲಿಂದು ಮಿಲಿಯನ್ಗಟ್ಟಲೆ ಭಾರತೀಯ ಯುವಕ ಯುವತಿಯರು ವೈಟ್ ಕಾಲರ್ಡ್ ಕಾರ್ಮಿಕರಾಗಿ ದುಡಿಯುತ್ತಿದ್ದರೂ, ಇವರ ಸಾಧಕ- ಬಾಧಕ, ದೂರು , ದುಮ್ಮಾನಗಳ ಪರಿಶೀಲನೆ, ಪರಾಮರ್ಶೆಗೆ ಕಾರ್ಮಿಕರ ಸಂಘಟಿತ ಹಾಗೂ ನೋಂದಾಯಿತ ಸಂಸ್ಥೆಯೇ ಇಲ್ಲದಿರುವುದು ದುರದೃಷ್ಟಕರ.
ಕೈಗಾರಿಕೆ ವ್ಯಾಖ್ಯಾನವನ್ನು ಬದಲಿಸಿ ಸುಪ್ರೀಂಕೋರ್ಟ್ ಸಂವಿಧಾನ ಪೀಠವೀಗ ಮಹತ್ವಪೂರ್ಣ ತೀರ್ಪು ನೀಡಿದೆ. ೧೯೭೮ರಲ್ಲಿ ಅಂದರೆ ನಲವತ್ತು ವರ್ಷಗಳ ಹಿಂದೆ ಬೆಂಗಳೂರು ವಾಟರ್ ಸಪ್ಲೆ ವರ್ಸ್ಸ್ ರಾಜಪ್ಪ ಪ್ರಕರಣದಲ್ಲಿ ಏಳು ಮಂದಿ ನ್ಯಾಯಮೂರ್ತಿಗಳು ನೀಡಿದ್ದ ಸಂವಿಧಾನಪೀಠದ ತೀರ್ಪನ್ನು ಭಾಗಶಃ ಈಗಿನ ತೀರ್ಪು ಪಕ್ಕಕ್ಕೆ ಸರಿಸಿದೆ. ಅಲ್ಲದೆ ೨೦೨೦ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ಇಂಡಸ್ಟ್ರಿಯಲ್ ಕೋಡ್ಗೆ ರಾಜಪ್ಪ ಕೇಸಿ ತೀರ್ಪು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ . ನ್ಯಾಯಮೂರ್ತಿ ಕೃಷ್ಣಯ್ಯರ್ ನೇತೃತ್ವದ ಸಂವಿಧಾನಪೀಠವು ೧೯೭೮ರಲ್ಲಿ ಕೈಗಾರಿಕೆ ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನವನ್ನು ನೀಡಿತ್ತು . ಅಲ್ಲದೆ ಇದಕ್ಕೆ ಮೂರು ಮಾನದಂಡಗಳನ್ನು (ಟ್ರಿಪಲ್ ಟೆಸ್ಟ್) ನಿಗದಿಪಡಿಸಿತ್ತು.
ಕಾರ್ಮಿಕ ಮತ್ತು ಮಾಲೀಕನ ಸಂಬಂಧವಲ್ಲದೆ ನಿರಂತರ ಕೈಗಾರಿಕೆ ಚಟುವಟಿಕೆ ಮತ್ತು ಅದರ ಹಂಚಿಕೆಯಲ್ಲದೆ ಜನತೆಯ ಅವಶ್ಯಕತೆಯನ್ನು ಪೂರೈಸುವ ಅರ್ಹತೆ ಇರುವಂತಹದನ್ನು ಸುಪ್ರೀಂಕೋರ್ಟ್ ಕೈಗಾರಿಕೆ ಎಂದು ಪರಿಗಣಿಸಿತ್ತು . ಒಟ್ಟಿನಲ್ಲಿ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ಹೈಕೋರ್ಟ್, ನ್ಯಾಯಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯಗಳಲ್ಲಿ ಈಗಲೂ ಲಕ್ಷಾಂತರ ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು ಈ ಪ್ರಕರಣಗಳ ವಿಚಾರಣೆಗೆ ಟ್ರಿಪಲ್ ಟೆಸ್ಟ್ ಆಧರಿಸಿಯೇ ಕೋರ್ಟುಗಳು ತೀರ್ಪು ನೀಡಬೇಕಿದೆ. ಅದರೆ ೨೦೨೦ರ ಕೈಗಾರಿಕೆ ಸಂಹಿತೆ, ಇನ್ನು ಮುಂದೆ ದಾಖಲಾಗುವ ಕೈಗಾರಿಕೆ ವ್ಯಾಜ್ಯಗಳಿಗೆ ಅನ್ವಯವಾಗುವುದೆಂದೂ, ಇವುಗಳಿಗೆ ಟ್ರಿಪಲ್ ಟೆಸ್ಟ್ ಅನ್ವಯಿಸುವುದಿಲ್ಲವೆಂದು ಹೇಳಲಾಗಿದೆ.
೧೯೭೮ರಲ್ಲಿ ದೇಶದ ವಿವಿಧ ಕಡೆ ಕಾರ್ಮಿಕರ ವೇತನ, ಭತ್ಯೆ, ಆರೋಗ್ಯವಿಮೆ. ಮಹಿಳಾ ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಸರ್ಕಾರದ ವಿರುದ್ದ ಹೋರಾಟ ನಡೆಸಿದ್ದವು. ಇಂತಹ ಕಾಲಘಟ್ಟದಲ್ಲಿಯೇ ರಾಜಪ್ಪ ಪಕರಣದಲ್ಲಿ ಸುಪ್ರೀಂಕೋರ್ಟಿನ ಏಳು ಮಂದಿ ನ್ಯಾಯಮೂರ್ತಿಗಳು ತೀರ್ಪು ನೀಡಿ ಕಾರ್ಮಿಕರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ಎತ್ತಿ ಹಿಡಿದಿದ್ದು. ಅದಕ್ಕೂ ಮುನ್ನ ದೇಶದಲ್ಲಿ ಕೈಗಾರಿಕೆ ಎಂಬುದಕ್ಕೆ ವಿಸ್ತೃತ ವಾದ ವ್ಯಾಖ್ಯಾನ ಇರಲಿಲ್ಲ . ಆದರೆ ಈಗ ಜಾಗತೀಕರಣದ ಪರಿಣಾಮವಾಗಿ ದೇಶದ ಕೈಗಾರಿಕೆ ಮತ್ತು ಕಾರ್ಮಿಕ ನೀತಿ ಬದಲಾಗಿದೆ. ವಿದೇಶಿ ಕಂಪನಿಗಳ ನೇರ ಬಂಡವಾಳ ಹೂಡಿಕೆ ಮತು ಖಾಸಗಿ ಕಂಪನಿಗಳ ನೀತಿಯ ಮೇಲೆ ಸರ್ಕಾರಗಳಿಗೆ ಹಿಡಿತವೇ ಇಲ್ಲದಂತಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಇಂದು ದೇಶದಲ್ಲಿ ನೂರಾರು ಖಾಸಗಿ ಐಟಿ ಕಂಪನಿಗಳಲ್ಲಿ ಮಿಲಿಯನ್ಗಟ್ಟಳೆ ಭಾರತೀಯ ಯುವಕ ಯುವತಿಯರು ವೈಟ್ ಕಾಲರ್ಡ್ ಕಾರ್ಮಿಕರಾಗಿದ್ದರೂ ಇಂತಹ ಲಕ್ಷಾಂತರ ಮಂದಿ ಕಾರ್ಮಿಕರ ಸಾಧಕ, ಬಾಧಕಗಳಿಗೆ ನಿರ್ದಿಷ್ಟ, ಸಂಘಟಿತ ಮತ್ತು ನೋಂದಾಯಿತ ಸಂಸ್ಥೆಯೇ ಇಲ್ಲದಿರುವುದು ದುರದೃಷ್ಟಕರ.
ಬಹುರಾಷ್ಟ್ರೀಯ ಕಂಪನಿಗಳ ಏಕಾಧಿಪತ್ಯ ಮತ್ತು ಏಕಪಕ್ಷೀಯ ತೀರ್ಮಾನಗಳನ್ನು ಇಲ್ಲಿ ಕೆಲಸ ಮಾಡುವ ಒಬ್ಬರು ಅಥವಾ ಇಬ್ಬರು ಪ್ರಶ್ನಿಸಿ ಕಾರ್ಮಿಕ ನ್ಯಾಯಾಲಯಗಳಿಗೆ ದೂರು ನೀಡಿದರೂ ಇದು ಶೋಷಿತ ಐಟಿ ಉದ್ಯೋಗಿಗಳಿಗೆ ನ್ಯಾಯವೇ ದೊರೆಯದಂತಹ ಸನ್ನಿವೇಶ ನಿರ್ಮಾಣವಾಗಿದೆ. ಭಾರತದಂತಹ ಬೃಹತ್ ಯುವ ಮಾನವ ಸಂಪನ್ಮೂಲವಿರುವ ದೇಶದಲ್ಲಿ ಐಟಿ -ಬಿಟಿ ವಲಯದಲ್ಲಿ ತೊಡಗಿರುವ ಬಿಳಿ ಕಾಲರಿನ ಕಾರ್ಮಿಕರ ಹಿತಾಸಕ್ತಿ ಕಾಪಾಡುವ ದಿಶೆಯಲ್ಲಿ ಶಕ್ತ ಕಾರ್ಮಿಕ ಸಂಘಟನೆಯ ಅಗತ್ಯವಿದೆ.


